ಸಾರ್ವಭೌಮ ರಾಷ್ಟ್ರದ ಮೇಲಿನ ದಾಳಿ ಖಂಡನೀಯ: ಸುರೇಶ್ ಕಲ್ಲಾಗರ್
ಕುಂದಾಪುರ: ಸಾಮ್ರಾಜ್ಯಶಾಹಿ ಅಮೇರಿಕಾ ಸಮಾಜವಾದಿ ವೆನಿಜುವೆಲಾ ದೇಶದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಸಾರ್ವಭೌಮ ರಾಷ್ಟ್ರದ ಮೇಲೆ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಭಾನುವಾರ ಇಲ್ಲಿನ ಹಂಚು ಕಾರ್ಮಿಕರ ಭವನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ವೆನಿಜುವೆಲಾ ದೇಶದಲ್ಲಿನ ತೈಲ ಸಂಪತ್ತನ್ನು ಲೂಟಿ ಹೊಡೆಯಲು ಅಮೇರಿಕಾದ ಸಂಚಿನ ಭಾಗವಾಗಿ ವೆನಿಜುವೆಲಾ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷರಾದ ಮಡುರೊ ಮತ್ತು ಅವರ ಪತ್ನಿ ಯನ್ನು ಬಂಧಿಸಿರುವುದು ಶಾಂತಿ ಬಯಸುವ ಎಲ್ಲರೂ ವಿರೋಧಿಸಬೇಕು ಎಂದು ಹೇಳಿದರು.
ಯುದ್ದದಾಹಿ, ದರೋಡೆಕೋರ ನೀತಿಯ ಅಮೇರಿಕಾ ಅಧ್ಯಕ್ಷ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಸಮಾಜವಾದಿ ವೆನಿಜುವೆಲಾ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಕೂಡಲೇ ವೆನಿಜುವೆಲಾ ಅಧ್ಯಕ್ಷರು ಹಾಗೂ ಅವರ ಪತ್ನಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಭಾರತ ಸರ್ಕಾರ ಅಮೇರಿಕಾದ ಗೊಡ್ಡು ಬೆದರಿಕೆಗೆ ಮಣಿಯದೇ ವೆನಿಜುವೆಲಾ ಪರ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್ ನರಸಿಂಹ ಮಾತನಾಡಿ; ಅಮೇರಿಕಾದ ಅಧ್ಯಕ್ಷ ಟ್ರಂಪ್ ನೀತಿಗಳು ಭಾರತ ದೇಶದ ದುಡಿಯುವ ವರ್ಗದ ಜನಜೀವನದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಜಗತ್ತಿನಲ್ಲಿ ಉಕ್ರೇನ್, ರಷ್ಯಾ, ಹಾಗೂ ಇಸ್ರೇಲ್ ಪ್ಯಾಲೇಸ್ತೈನ್ ಮೇಲೆ ನಡೆಸುತ್ತಿರುವ ದಾಳಿ ಸಾಮ್ರಾಜ್ಯಶಾಹಿ ಅಮೇರಿಕಾವೇ ನಡೆಸುತ್ತಿದೆ. ಮುಂದೆ ಭಾರತ ಅಮೇರಿಕಾದ ಷರತ್ತುಗಳಿಗೆ ಒಪ್ಪದಿದ್ದರೆ ನಮ್ಮ ದೇಶದ ಮೇಲೂ ದಾಳಿಯಾಗುವ ಅಪಾಯವಿದೆ ಎಂದರು.
ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಶಿಧರ ಗೊಲ್ಲ, ಜಿಲ್ಲಾ ಸಮಿತಿ ಸದಸ್ಯರಾದ ಶೀಲಾವತಿ, ಬಲ್ಕೀಸ್, ಕುಂದಾಪುರ ತಾಲೂಕು ಸಮಿತಿ ಸದಸ್ಯ ಚಿಕ್ಕ ಮೊಗವೀರ, ಸಂತೋಷ್ ಹೆಮ್ಮಾಡಿ, ಅಣ್ಣಪ್ಪ ಅಬ್ಬಿಗುಡ್ಡಿ, ರಾಮಚಂದ್ರ ನಾವಡ ಮೊದಲಾದವರಿದ್ದರು.



