ಉಡುಪಿ: ಅಜೆಕಾರು ಸೇಕ್ರೆಡ್ ಹಾರ್ಟ್ ಆಫ್ ಜೀಜಸ್ ಚರ್ಚಿನಿಂದ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ನೂತನ ಧರ್ಮಗುರುಗಳಾಗಿ ವಂ|ಹೆನ್ರಿ ಮಸ್ಕರೇನ್ಹಸ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಪ್ರಸ್ತುತ ಧರ್ಮಗುರು ವಂ|ಡೆನಿಸ್ ಡೆಸಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ ಅವರು ನೂತನ ಧರ್ಮಗುರುಗಳನ್ನು ಚರ್ಚಿಗೆ ಆತ್ಮೀಯವಾಗಿ ಸ್ವೀಕರಿಸಿದರು.
ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಅಧಿಕಾರ ಸ್ವೀಕಾರ ಸಮಾರಂಭದ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.
ಚರ್ಚಿನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದ ವಂ|ಹೆನ್ರಿ ಮಸ್ಕರೇನ್ಹಸ್ ಅವರು ಚರ್ಚಿನ ಸದಸ್ಯರು ನನಗೆ ನೀಡಿದ ಸ್ವಾಗತದಿಂದ ನಾನು ತುಂಬಾ ಭಾವುಕರಾಗಿದ್ದೇನೆ. ಚರ್ಚ್ ಆವರಣಕ್ಕೆ ಪ್ರವೇಶಿಸಿದಾಗ ಸಕಾರಾತ್ಮಕ ಸ್ಪೂರ್ತಿ ಮತ್ತು ಸಂತೋಷಭರಿತ ವಾತಾವರಣವನ್ನು ಅನುಭವಿಸಿದೆ. ಇದಕ್ಕೆ ಕಾರಣ ಇಲ್ಲಿ ಸೇವೆ ನೀಡಿದ ವಂ| ಡೆನಿಸ್ ಡೆಸಾ ಅವರ ಪ್ರೇರಣೆ ಮತ್ತು ಮಾರ್ಗದರ್ಶನ. ನೀವು ಅವರಿಗೆ ತೋರಿದ ಪ್ರೀತಿ ನಮ್ಮ ಪಾದ್ರಿಗಳು ಹಾಗೂ ಧಾರ್ಮಿಕರಿಗೆ ನೀಡುವ ಗೌರವವನ್ನು ತೋರಿಸುತ್ತದೆ. ದೇವರ ಸೇವಕರಾಗಿ, ಅವರ ಜನರಿಗೆ ಸೇವೆ ಸಲ್ಲಿಸುವುದು ನನ್ನ ಕರ್ತವ್ಯವಾಗಿದ್ದು ಪ್ರತಿಯೊಬ್ಬರ ಸಹಕಾರ ಬಯಸುವುದಾಗಿ ಹೇಳಿದರು.
ನಿರ್ಗಮನ ಧರ್ಮಗುರು ವಂ|ಡೆನಿಸ್ ಡೆಸಾ ಮಾತನಾಡಿ ಕಳೆದ ನಾಲ್ಕು ವರ್ಷಗಳಲ್ಲಿ ತೊಟ್ಟಂ ಚರ್ಚಿನ ಪ್ರತಿಯೊಬ್ಬ ಸದಸ್ಯರ ಪ್ರೀತಿ ಮತ್ತು ಆರೈಕೆಯನ್ನು ಅನುಭವಿಸಿದ್ದೇನೆ. ದೈವ ಭಕ್ತಿಯ ಸಮುದಾಯವಾಗಿರುವ ತೊಟ್ಟಂ ಸದಸ್ಯರು, ಚರ್ಚಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ನೂತನ ಧರ್ಮಗುರುಗಳಿಗೂ ಕೂಡ ಅದೇ ರೀತಿಯ ಸಹಕಾರ, ಪ್ರೀತಿ ನೀಡುವಂತೆ ಮನವಿ ಮಾಡಿದರು.
ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಧರ್ಮಗುರುಗಳಾದ ವಂ|ಆಲ್ಬನ್ ಡಿಸೋಜಾ, ಆಧ್ಯಾತ್ಮಿಕ ಧರ್ಮಗುರು ವಂ|ರೋಮನ್ ಮಸ್ಕರೇನ್ಹಸ್, ಕಣಜಾರು ಲೂರ್ಡ್ ಮಾತೆಯ ಚರ್ಚಿನ ಧರ್ಮಗುರು ವಂ|ಹೆರಾಲ್ಡ್ ಪಿರೇರಾ, ಅಜೆಕಾರು ಚರ್ಚಿನ ನೂತನ ಧರ್ಮಗುರು ವಂ|ಪ್ರದೀಪ್ ಕಾರ್ಡೋಜಾ, ಸ್ಥಳೀಯ ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಸುಶ್ಮಾ ಲೂವಿಸ್, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್, 20 ಆಯೋಗಗಳ ಸಂಯೋಜಕಿ ಶಾಂತಿ ಫೆರ್ನಾಂಡಿಸ್ ವಿವಿಧ ಚರ್ಚುಗಳಿಂದ ಆಗಮಿಸಿದ ಅಸಂಖ್ಯಾತ ಭಕ್ತ ವೃಂದದವರು ಉಪಸ್ಥೀತರಿದ್ದರು.




