ಉಡುಪಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮದ ವಿರುದ್ಧ ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ಉಡುಪಿಯಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿರುವುದು ಖಂಡನೀಯ. ರಾಜಕೀಯದಲ್ಲಿ ವಿಭಿನ್ನ ಸಿದ್ದಾಂತಗಳು ಪ್ರಜಾಪ್ರಭುತ್ವದ ಭಾಗವಾಗಿದ್ದು ಟೀಕೆಗಳು ಮತ್ತು ಯಾವುದೇ ಪ್ರತಿಕ್ರಿಯೆಗಳು ಗೌರವಯುತ ಹಾಗೂ ಸೌಜನ್ಯದ ಭಾಷೆಯಲ್ಲಿರಬೇಕು. ರಾಹುಲ್ ಗಾಂಧಿಯವರನ್ನು ಡ್ರಗ್ ಎಡಿಕ್ಟ್ ಎಂದು ನಿಂದಿಸಿ ಅವರ ವಂಶವನ್ನು ಧ್ವಂಸ ಮಾಡುವುದಾಗಿ ಬಹಿರಂಗವಾಗಿ ಹೇಳಿರುವ ಉಡುಪಿ ಶಾಸಕರ ಗೂಂಡಾ ಸಂಸ್ಕೃತಿಯನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಬಲವಾಗಿ ಖಂಡಿಸಿದ್ದಾರೆ.
ಶಾಸಕ ಯಶಪಾಲ್ ಸುವರ್ಣ ಅವರು ದೇಶದ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರನ್ನು ಸಂಬೋಧಿಸಿ ರಾಹುಲ್ ಗಾಂಧಿ ಅವರ ವಂಶ ಹಾಗೂ ಕಾಂಗ್ರೆಸ್ ಪಕ್ಷವನ್ನು ಧ್ವಂಸ ಮಾಡುವುದಾಗಿ ಹೇಳಿರುವುದು ಅವರ ನೀಚ ಮನಸ್ಥಿತಿಯನ್ನು ತೋರಿಸುತ್ತದೆ. ಯಶಪಾಲ್ ಸುವರ್ಣ ಅವರು ಇನ್ನೊಮ್ಮೆ ಜನ್ಮ ತಾಳಿ ಬಂದರೂ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಓರ್ವ ಕಾರ್ಯಕರ್ತನನ್ನು ಮುಟ್ಟುವ ತಾಕತ್ತು ಅವರಿಗಿಲ್ಲ.
ಪ್ರಕಾಶ್ ರಾಜ್ರನ್ನು ಅರಬ್ಬಿ ಸಮುದ್ರಕ್ಕೆ ಎಸೆದು ಮೀನುಗಳಿಗೆ ಆಹಾರವನ್ನು ಮಾಡಿಸುವುದಾಗಿ ಹೇಳಿಕೆ ನೀಡಿದ ಯಶಪಾಲ್ ಸುವರ್ಣ ಅವರದ್ದು ಭಯೋತ್ಪಾದಕ ಮನಸ್ಥಿತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿಯವರು ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮದಲ್ಲಿ ನೊಂದಿದ್ದು ಅವರ ಪರವಾಗಿ ಧ್ವನಿ ಎತ್ತಿದ್ದಾರೆ. ಇದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಓರ್ವ ಪ್ರಭಾವಿ ಕೇಂದ್ರ ಸಚಿವ ರಾಜೀನಾಮೆ ನೀಡಿದ್ದು ಇದು ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ರಾಹುಲ್ ಗಾಂಧಿಯವರ ಕುರಿತು ಸಾರ್ವಜನಿಕ ಸಭೆಯಲ್ಲಿ ಸುಳ್ಳು ಸುಳ್ಳು ವಿಚಾರವನ್ನು ಸೃಷ್ಟಿಸಿ ಅಸಹ್ಯವಾಗಿ ಮಾತನಾಡಿ ಬಿಜೆಪಿಯ ಅಂಧಭಕ್ತರನ್ನು ಸಂತೋಷ ಪಡಿಸಬಹುದು ಆದರೆ ಜನರು ನಿಮ್ಮನ್ನು ಗಂಭೀರವಾಗಿ ಗಮನಿಸುತ್ತಾ ಇದ್ದು ನಿಮಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.
ದೇಶದ ವಿದ್ಯಾರ್ಥಿಗಳು ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದಾದ್ಯಂತ ಹೋರಾಟ ನಡೆಸಿರುವುದು ಪ್ರಧಾನಿಯವರ ನಿದ್ದೆಗೆಡಿಸಿದ್ದು ಮಧ್ಯ ರಾತ್ರಿ ಎದ್ದು ರೀಲ್ಸ್ ಮಾಡಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸುವುದು ಕಂಡರೆ ಎಷ್ಟೊಂದು ತಲೆಕೆಡಿಸಿಕೊಂಡಿದ್ದಾರೆ ಎನ್ನುವುದು ತೋರಿಸುತ್ತದೆ.
ಯುವ ಸಮೂಹ ಹಾಗೂ ವಿದ್ಯಾರ್ಥಿಗಳಿಂದಲೇ ಅಧಿಕಾರ ಪಡೆದುಕೊಂಡ ಬಿಜೆಪಿ ಹಾಗೂ ಯಶಪಾಲ್ ಸುವರ್ಣ ಅವರು ಇಂದು ಅದೇ ವಿದ್ಯಾರ್ಥಿ ಹಾಗೂ ಯುವ ಸಮೂಹವನ್ನು ಭಯೋತ್ಪಾದಕರು ಹಾಗೂ ದೇಶದ್ರೋಹಿಗಳೆಂದು ಹೇಳಿರುವುದು ಅವರ ನೀಚ ಮನಸ್ಥಿತಿಯನ್ನು ತೋರಿಸುತ್ತದೆ.
ಅಟಲ್ ಬಿಹಾರಿ ವಾಜಪೇಯಿ, ಡಾ. ವಿ ಎಸ್ ಆಚಾರ್ಯ ಅಂತಹ ಗೌರವಾನ್ವಿತ ನಾಯಕರನ್ನು ಹೊಂದಿದ್ದ ಬಿಜೆಪಿ ಪಕ್ಷದಲ್ಲಿ ಯಶಪಾಲ್ ಅಂತಹ ವ್ಯಕ್ತಿಗಳು ಶಾಸಕರಾಗಿರುವುದು ಉಡುಪಿಯ ದುರಂತವೇ ಸರಿ.
ಕ್ಷೇತ್ರದ ಅಭಿವೃದ್ಧಿ ಮಾಡದೇ ಕೇವಲ ಅನಗತ್ಯ ಹೇಳಿಕೆಗಳಲ್ಲೇ ಮೂರುವರೆ ವರ್ಷವನ್ನು ಕಳೆದಿರುವ ಉಡುಪಿಯ ಶಾಸಕರು, ಹಿಂದಿನ ಸರಕಾರದಲ್ಲಿ ರಘುಪತಿ ಭಟ್ ಅವರು ಶಾಸಕರಾಗಿದ್ದ ವೇಳೆ ಆರಂಭಗೊಂಡ ಜಿಲ್ಲಾಸ್ಪತ್ರೆಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಿಸುವ ತಾಕತ್ತು ಈಗಿನ ಶಾಸಕರಿಗೆ ಇಲ್ಲ.
ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳು ಇದ್ದು, ಕೇವಲ ಅಸಹ್ಯಕರ ಹೇಳಿಕೆಗಳನ್ನು ನೀಡುವುದರಲ್ಲೆ ಕಾಲಹರಣ ಮಾಡಿ ಐದು ವರ್ಷ ಪೊರೈಸುವ ಆಲೋಚನೆಯಲ್ಲಿ ಶಾಸಕರಾದ ಯಶ್ಪಾಲ್ ಅವರು ಇದ್ದಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಬಗ್ಗೆ ಕೀಳು ಭಾಷೆ ಬಳಸಿದ ಶಾಸಕರು ಕೂಡಲೇ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಅವರ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಶತಸಿದ್ಧ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




