ಪ್ರೀತಿ ಹಂಚೋಣ.. ಅರಿತು ಬಾಳೋಣ..
ಹೊಸ ವರ್ಷವೆಂದರೆ ಹೊಸ ನಿರೀಕ್ಷೆಗಳ ಹೂರಣ!
ಪ್ರಿಯ ಓದುಗ ಮಿತ್ರರಿಗೆ ಸಮನಸ್ಕಾರ,
2025 ನಮ್ಮ ಬದುಕಿಗೆ ಅದೆಷ್ಟೋ ಖುಷಿಯ ಹಾಗೂ ದುಃಖದ ಕ್ಷಣಗಳನ್ನು ಕೊಟ್ಟು ವಿದಾಯದ ಅಂಚಿನಲ್ಲಿದೆ. ಪ್ರತೀ ಬಾರಿಯೂ ಹೊಸ ವರ್ಷ ಹತ್ತಿರ ಬಂದಾಗಲೆಲ್ಲಾ ನಮ್ಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ತಂದುಕೊಳ್ಳಬೇಕು ಎನ್ನುವ ಪ್ರತಿಜ್ಞೆಯನ್ನು ನಮ್ಮೊಳಗೆ ಮಾಡಿಕೊಳ್ಳುತ್ತೇವೆ. ಆದರೆ ಈ ಪ್ರತಿಜ್ಙೆ ಹೊಸ ವರ್ಷದ ಆರಂಭದ ದಿನಗಳಲ್ಲಿ ಮಾತ್ರ ಯಥಾವತ್ತು ಪಾಲಿಸುತ್ತೇವೆ. ಮುಂದೆ, ಅದೇ ರಾಗ, ಅದೇ ಹಾಡು.
ಹೊಸ ವರ್ಷ ಬಂತೆಂದರೆ ದೇಹ ದಂಡನೆ, ಆರೋಗ್ಯಕರ ಆಹಾರ ಪದ್ದತಿ ಸೇವನೆ ಇವೆರಡು ಬದಲಾವಣೆಗಳು ನಮ್ಮೆಲ್ಲರ ಆಪ್ತ ವಲಯದಲ್ಲಿ ಕೇಳಿ ಬರುವ ಸಹಜ ಮಾತುಗಳು. ಪ್ರತೀ ಬಾರಿಯೂ ಇವೆರಡನ್ನು ಪಾಲನೆ ಮಾಡುವ ಸಂಕಲ್ಪ ತೊಡುವ ದಿನವಾಗಿ ಹೊಸ ವರ್ಷವನ್ನು ನಾವೆಲ್ಲಾ ಎದುರು ನೋಡುತ್ತಿರುತ್ತೇವೆ. ಇವೆಲ್ಲವೂ ಬದಲಾಯಿಸಬೇಕೆಂದರೆ ಹೊಸ ವರ್ಷವೇ ಬರಬೇಕೆಂದಿಲ್ಲ. ನಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಲು ಹೊಸ ವರ್ಷ ನಮಗೆಲ್ಲಾ ಕೇವಲ ನೆಪವಷ್ಟೆ. ನಮ್ಮೊಳಗೆ ಬದಲಾವಣೆ ಮಾಡಬೇಕೆನ್ನುವ ದೃಢ ಮನಸ್ಸೊಂದಿದ್ದರೆ ಸಾಕು. ಆ ಮನಸ್ಸೆ ಇಲ್ಲದಿದ್ದರೆ ಪ್ರತಿಜ್ಞೆ ಪ್ರತಿಜ್ಞೆಯಾಗಿಯೇ ಉಳಿಯುತ್ತದೆ ವಿನಃ ಅದು ಕಾರ್ಯರೂಪಕ್ಕೆ ಬರಲಾರದು.
ಇನ್ನು ಹೊಸ ವರ್ಷ ಎಂದರೆ ಮನೆಯೊಳಗಿನ ಗೋಡೆಯ ಮೇಲೆ ತೂಗು ಹಾಕಿದ ಕ್ಯಾಲೆಂಡರ್ ಬದಲಿಸುವುದು ಮಾತ್ರವೇ ಅಲ್ಲ. ಹೊಸ ವರ್ಷವು ನಮ್ಮ ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಿಗುವ ಮತ್ತೊಂದು ಸದಾವಕಾಶ. ಈಗಷ್ಟೇ ಕಳೆದ ವರ್ಷದಲ್ಲಿ ಸಾಧಿಸಿದ ಸಾಧನೆಗಳು, ಗಮ್ಯವೇ ತಲುಪದ ಇಟ್ಟುಕೊಂಡ ಗುರಿಗಳು, ಅವರಿವರೊಂದಿಗೆ ಬೆರೆತಾಗ ಕಲಿತ ಜೀವನ ಪಾಠಗಳು ಇವೆಲ್ಲವನ್ನು ಮನಸ್ಸಿನ ಮನಃ ಪಟದಲ್ಲಿರಿಸಿಕೊಂಡು ಹೊಸ ವರ್ಷಕ್ಕೆ ಹೊಸ ನಿರ್ಣಯಗಳನ್ನು ಮಾಡುವ ಪಣತೊಡುವ ಜೊತೆಗೆ, ಹೊಸ-ಹೊಸ ಗುರಿಗಳನ್ನು ಹಾಕಿ ಆ ಗುರಿಯೆಡೆಗೆ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡೋಣ. ಹೊಸ ವರ್ಷವೆಂದರೆ ಹೊಸ ನಿರೀಕ್ಷೆಗಳ ಹೂರಣ! 2026 ವರ್ಷವಿಡೀ ಪ್ರೀತಿ ಹಂಚೋಣ.. ಅರಿತು ಬಾಳೋಣ.. ಉಡುಪಿ ಡಿಜಿಟಲ್ ನ್ಯೂಸ್ ನ ಎಲ್ಲಾ ಓದುಗ ಮಿತ್ರರಿಗೆ ಹೊಸ ವರ್ಷದ ಶುಭಕಾಮನೆಗಳು. ಈ ವರ್ಷ ನಿಮಗೆಲ್ಲರಿಗೂ ತರಲಿ ಹರುಷ. ಧನ್ಯವಾದಗಳು. ಪ್ರೀತಿ ಇರಲಿ.

ಶ್ರೀಕಾಂತ ಹೆಮ್ಮಾಡಿ, ಸಂಪಾದಕ




