ಮಧ್ಯಪ್ರಾಚ್ಯದಲ್ಲಿ ಆರಂಭಗೊಂಡ ಯುದ್ಧದ ಪರಿಣಾಮ ದೇಶದಲ್ಲಿ ಎಲ್ಪಿಜಿ ಅನಿಲ ಪೊರೈಕೆಗೆ ಭಾರೀ ಸಮಸ್ಯೆಯಾಗಿದ್ದು ಈ ನಡುವೆ ಕೇಂದ್ರ ಸರಕಾರ ಮೂರನೇ ಬಾರಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ 993 ರೂ ಏರಿಕೆ ಮಾಡಲಾಗಿದ್ದು ಇದರ ನೇರ ಪರಿಣಾಮ ಹೋಟೆಲ್ ಉದ್ಯಮದ ಮೇಲೆ ಬಿದ್ದಿದೆ.
ಮಾರ್ಚ್ನಲ್ಲಿ 144 ರೂ, ಏಪ್ರಿಲ್ನಲ್ಲಿ 200 ರೂ ಹಾಗೂ ಇದೀಗ ಮೂರನೇ ಬಾರಿಗೆ 993 ರೂ ಹೆಚ್ಚಳ ಮಾಡಲಾಗಿದೆ. ಈ ಏರಿಕೆಯು ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಊಟ, ತಿಂಡಿ ಮತ್ತು ಪಾನೀಯಗಳ ಬೆಲೆಗಳು ಹೆಚ್ಚಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ದೇಶದಾದ್ಯಂತ ಹೋಟೆಲ್ ಮಾಲಕರು ಬೆಲೆ ಏರಿಕೆ ವಿರುದ್ದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಗ್ಯಾಸ್ ಅಭಾವದಿಂದ ಈಗಾಗಲೇ ಹೋಟೆಲ್ಗಳಲ್ಲಿ ಕಾಫಿ, ತಿಂಡಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡಿದೆ. ಇದೀಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದರಿಂದ ಹೋಟೆಲ್ ಖಾದ್ಯಗಳ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಕಾಫಿ ಕುಡಿಯಲೂ ಜನ 10 ಬಾರಿ ಯೋಚಿಸುವಂತಾಗಬಹುದು.ಅಂತಿಮವಾಗಿ ಇದರ ಹೊರೆ ಗ್ರಾಹಕರ ಮೇಲೆ ಬೀಳಲಿದೆ.
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಗೆ ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಮತ್ತೆ ಈ ರೀತಿ ಬೆಲೆ ಏರಿಕೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಬದಲಾಗಿ ಬ್ಲಾಕ್ ಮಾರ್ಕೆಟ್ನಲ್ಲಿ ಆಗುತ್ತಿರುವ ಮಾರಾಟಕ್ಕೆ ಮೊದಲು ಬ್ರೇಕ್ ಹಾಕಬೇಕು ಎಂದು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ಗ್ಯಾಸ್ ಸಮಸ್ಯೆ ಪರಿಹಾರ ಕಂಡಿದೆ ಎಂದು ಹೇಳಿದ್ದರೂ ಕೂಡ ಸಿಲಿಂಡರ್ ಅಭಾವ ಇನ್ನು ಕೂಡ ಸರಿಯಾಗಿಲ್ಲ. ವಾಣಿಜ್ಯ ಸಿಲಿಂಡರ್ ಗಳಿಗೆ ಹಂಚಿಕೆ ಮಿತಿ ಇದ್ದು ಹೆಚ್ಚಿನ ಗ್ಯಾಸ್ ಏಜೆನ್ಸಿಗಳು ದುಪ್ಪಟ್ಟು ಬೆಲೆಗೆ ಗೃಹ ಬಳಕೆಯ ಸಿಲಿಂಡರ್ ಗಳನ್ನು ಹೋಟೆಲುಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಮನೆ ಬಳಕೆಯ ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು ನಗರ ಪ್ರದೇಶಗಳಿಗೆ 20 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ನಿಗದಿಪಡಿಸಲಾಗಿದೆ. ಈ ಅವಧಿಯನ್ನು ಪೂರ್ಣ ಮಾಡಿದ ಗ್ರಾಹಕರಿಗೆ ಕೂಡಲೇ ಸಿಲಿಂಡರ್ ನೀಡಬೇಕು ಎಂಬ ನಿಯಮವಿದ್ದರೂ ಕೂಡ ಗ್ಯಾಸ್ ಏಜೆನ್ಸಿಗಳು ಪೊರೈಕೆ ಮಾಡುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿದರೆ ಜಿಲ್ಲಾಧಿಕಾರಿ, ಸಂಸದರನ್ನು ಕೇಳಿ ಎಂಬ ಉಡಾಫೆ ಉತ್ತರ ನೀಡುತ್ತಾರೆ ಎಂಬ ದೂರುಗಳು ಕೂಡ ಕೇಳಿ ಬಂದಿದೆ. ಇದರ ಮಧ್ಯೆ ಏಕಾಏಕಿ ಈ ರೀತಿ ವಾಣಿಜ್ಯ ಸಿಲಿಂಡರ್ ದರ ಏರಿಕೆ ಮಾಡಿದ್ದು ಸರಿಯಲ್ಲ. ಇದರಿಂದ ಮತ್ತೆ ಗ್ರಾಹಕರ ಮೇಲೆ ಹೊರೆ ಹಾಕಬೇಕಾದ ಅನಿವಾರ್ಯತೆ ಬರುತ್ತದೆ
ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳಿಗೆ ಆರ್ಥಿಕ ಹೊರೆಯಾಗಲಿದೆ. ಬೆಲೆ ಏರಿಕೆಯಿಂದ ಆಹಾರ ಬೆಲೆಗಳ ಏರಿಕೆ ಮಾಡಬೇಕಾದ ಭೀತಿ ಶುರುವಾಗಿದೆ. ಈಗಾಗಲೇ ಹೋಟೆಲ್ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆಯಿಂದ ಮತ್ತಷ್ಟು ಸಮಸ್ಯೆ ಶುರುವಾಗಿದೆ. ಒಮ್ಮೆಲೆ ಈ ರೀತಿಯಾಗಿ ಬೆಲೆ ಏರಿಕೆ ಮಾಡಿದರೆ ಗ್ರಾಹಕರಿಗೂ ಹೊರೆಯಾಗುತ್ತದೆ. ಗ್ಯಾಸ್ ಲಭ್ಯತೆಯೇ ಸಮರ್ಪಕವಾಗಿ ಇಲ್ಲ, ಈಗ ಬೆಲೆ ಏರಿಕೆ ಮಾಡಿರುವುದು ಉದ್ಯಮಿಗಳು ಮತ್ತಷ್ಟು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನುವುದು ಹೋಟೆಲ್ ಮಾಲಿಕರ ಅಳಲಾಗಿದೆ.
ಒಟ್ಟಾರೆಯಾಗಿ ಕೇಂದ್ರ ಸರಕಾರ ಏಕಾಏಕಿಯಾಗಿ 930 ರೂ ಏರಿಕೆ ಮಾಡಿರುವ ದರವನ್ನು ಇಳಿಸಬೇಕು. ಗೃಹ ಬಳಕೆಯ ಸಿಲಿಂಡರ್ ಸೂಕ್ತ ಸಮಯದಲ್ಲಿ ಒದಗಿಸುವಂತೆ, ತಪ್ಪಿದ್ದಲ್ಲಿ ಸಂಬಂಧಪಟ್ಟ ಏಜೆನ್ಸಿಗಳ ವಿರುದ್ದ ಕ್ರಮ ಕೈಗೊಳ್ಳುವ ವ್ಯವಸ್ಥೆ ನಡೆಯಬೇಕು. ಇದರಿಂದ ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟಕ್ಕೆ ಬ್ರೇಕ್ ಹಾಕಿದಂತಾಗುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಿಲಿಂಡರ್ ಸಮಸ್ಯೆ ವಿಷಮ ಸ್ಥಿತಿಗೆ ತಲುಪುವುದರಲ್ಲಿ ಎರಡು ಮಾತಿಲ್ಲ.




