ನಮಸ್ಕಾರ ಸ್ನೇಹಿತರೇ,
ಒಂದು ಸುದ್ದಿ ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ. ಆದರೆ ಅದನ್ನು ಮುನ್ನಡೆಸಿಕೊಂಡು ಹೋಗುವುದು ಪ್ರವಾಹದ ವಿರುದ್ದ ಈಜುವಂತಹ ಅನುಭವ ಸಿಗುವುದು ಸುಳ್ಳಲ್ಲ. ಇಂದಿನ ದಿನಮಾನಗಳಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ಡಿಜಿಟಲ್ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಎನ್ನುವ ಸುದ್ದಿ ಕೊಡುವ ಜಿದ್ದಿಗೆ ಬಿದ್ದು ತನ್ನ ವಿಶ್ವಾಸಾರ್ಹವನ್ನು ಕಳೆದುಕೊಳ್ಳುತ್ತಿರುವ ಹೊತ್ತಲ್ಲೇ ಡಿಜಿಟಲ್ ಮಾಧ್ಯಮವೊಂದನ್ನು ಭಯದಿಂದಲೇ ಪ್ರಾರಂಭಿಸಿದವರು ನಾವು.
‘ಉಡುಪಿ ಡಿಜಿಟಲ್ ನ್ಯೂಸ್’ ಎನ್ನುವ ಅಂತರ್ಜಾಲ ಪತ್ರಿಕೆಯನ್ನು ಈ ವರ್ಷದ ಆರಂಭದಲ್ಲೇ ನಿಮ್ಮ ಬೊಗಸೆಗಿಟ್ಟ ನಮಗೆ ಅಲೆ-ಅಲೆಯಾಗಿ ಉಕ್ಕುಕ್ಕಿ ಬಂದ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ನಿಮ್ಮಂತಹ ಓದುಗ ದೊರೆಗಳ ವಿಶ್ವಾಸಾರ್ಹವನ್ನು ಗಳಿಸಿದ್ದೇವೆ ಎನ್ನುವ ಹೆಮ್ಮೆ ಇದೆ. ಅದಕ್ಕಾಗಿಯೇ ನಮ್ಮ ಉಡುಪಿ ಡಿಜಿಟಲ್ ನ್ಯೂಸ್ ಲೋಕಾರ್ಪಣೆಗೊಂಡ ತಿಂಗಳ ಆಸುಪಾಸಲ್ಲೇ ಫೇಸ್ಬುಕ್ ಪೇಜ್ 10,000 ಫಾಲೋವರ್ಸ್ ಅನ್ನು ತಲುಪಿದೆ. ಮಾತ್ರವಲ್ಲದೇ ನಮ್ಮ ಇನ್ಸ್ಟಾಗ್ರಾಮ್ 5,000 ಫಾಲೋವರ್ಸ್ ಅನ್ನು ಗಳಿಸಿಕೊಂಡಿದೆ. ಇದು ನೀವು ನಮಗೆ ಕೊಟ್ಟ ಅಂಕವಲ್ಲದೇ ಬೇರೇನು ಅಲ್ಲ.
ಈ ಹತ್ತು ಸಾವಿರ ಐವತ್ತಾಗಲಿ. ಐವತ್ತು ಲಕ್ಷ ದಾಟಲಿ. ಆದರೆ ಇಂದು ಹೇಗಿದ್ದೇವೊ, ಮುಂದೆಯೂ ಹಾಗೆಯೇ ಇರುತ್ತೇವೆ. ಸುದ್ದಿಯಲ್ಲಿ ನಮ್ಮದು ಎಂದಿಗೂ ರಾಜಿ ಇಲ್ಲ. ಅಂದಹಾಗೆ ನಮ್ಮದು ಎಡವೂ ಅಲ್ಲ, ಬಲವೂ ಅಲ್ಲ. ಏನಿದ್ದರೂ ನೇರ ನಿಷ್ಠೂರ ಪಂಥ. ಯಾರೇ ತಪ್ಪು ಮಾಡಿದರೂ ಮುಲಾಜಿಲ್ಲದೇ ಅವರ ತಪ್ಪುಗಳನ್ನು ಬಯಲಿಗೆಳೆಯುವ ಕೆಲಸ ಸದಾ ಮಾಡುತ್ತಿದ್ದೇವೆ. ಮುಂದೆಯೂ ಮಾಡಲಿದ್ದೇವೆ. ನಿಮ್ಮಂತಹ ಓದುಗ ದೊರೆಗಳು ಜೊತೆಗಿದ್ದರೆ ನಮಗೆ ಮತ್ತಷ್ಟು ಪ್ರೇರಣೆ. ಇನ್ನಷ್ಟು ಶಕ್ತಿ. ಇದೇ ರೀತಿ ನಮ್ಮನ್ನು ಬೆಳೆಸುತ್ತಿರಿ..
ಧನ್ಯವಾದಗಳು. ಮತ್ತೆ ಸಿಗೋಣ..

ಶ್ರೀಕಾಂತ ಹೆಮ್ಮಾಡಿ
ಸಂಪಾದಕ




