ಸಂಭಾಜಿ ನಗರ: ಭಾರತಕ್ಕೆ ಏನಾದರೂ ಒಳ್ಳೆಯದು ಅಥವಾ ಕೆಟ್ಟದು ಸಂಭವಿಸಿದರೆ ಅದಕ್ಕಾಗಿ ಹಿಂದೂ ಸಮಾಜವನ್ನು ಪ್ರಶ್ನಿಸಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತವು ಕೇವಲ ಭೌಗೋಳಿಕ ಪ್ರದೇಶದ ಹೆಸರಲ್ಲ, ಅದರ ನಡವಳಿಕೆ, ಮೌಲ್ಯಗಳು ಮತ್ತು ಪಾತ್ರವೇ ದೇಶದ ನಿಜವಾದ ಗುರುತು ಎಂದು ಹೇಳಿದರು.
ಹಿಂದೂ ಸಮಾಜವು ಸಾಂಪ್ರದಾಯಿಕವಾಗಿ ಎಲ್ಲರನ್ನೂ ಒಳಗೊಳ್ಳುವ ಸ್ವಭಾವ ಹೊಂದಿದ್ದು, ಆಚರಣೆಗಳು, ಉಡುಗೆ ತೊಡುಗೆ, ಆಹಾರ ಪದ್ಧತಿ, ಭಾಷೆ, ಜಾತಿ ಹಾಗೂ ಉಪಜಾತಿಗಳಲ್ಲಿ ವೈವಿಧ್ಯತೆಯನ್ನು ಒಪ್ಪಿಕೊಳ್ಳುತ್ತದೆ. ಈ ಕಾರಣದಿಂದ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾಗವತ್ ಅಭಿಪ್ರಾಯಪಟ್ಟರು.
ಸಮ್ಮಿಲನ ಮತ್ತು ಸಾಮರಸ್ಯದ ಸಹಬಾಳ್ವೆಯನ್ನು ನಂಬುವವರೇ ಹಿಂದೂ ಸಮಾಜದ ನಿಜವಾದ ಸ್ವರೂಪವನ್ನು ಪ್ರತಿನಿಧಿಸುತ್ತಾರೆ. ಶತಮಾನಗಳ ಆಕ್ರಮಣಗಳು ಮತ್ತು ವಿನಾಶಗಳ ನಡುವೆಯೂ ಈ ಸಂಪ್ರದಾಯ ಉಳಿದಿರುವುದು ಜನರು ತಮ್ಮ ಮೌಲ್ಯಗಳು ಮತ್ತು ಧರ್ಮವನ್ನು ನಾಶವಾಗಲು ಬಿಡದ ಕಾರಣ ಎಂದು ಅವರು ಹೇಳಿದರು. ಅಂತಹ ಜನರನ್ನು ಹಿಂದೂಗಳು ಎಂದು, ಅಂತಹ ಜನರ ಭೂಮಿಯನ್ನು ಭಾರತ ಎಂದು ಕರೆಯಲಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಜನರು ಒಳ್ಳೆಯವರು, ದೃಢರು ಮತ್ತು ಪ್ರಾಮಾಣಿಕರಾಗಿರಲು ಶ್ರಮಿಸಿದರೆ, ಅದರ ಪ್ರತಿಬಿಂಬ ದೇಶದ ಜಾಗತಿಕ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತದೆ ಎಂದು ಭಾಗವತ್ ಹೇಳಿದರು. ಜಗತ್ತು ಭಾರತದಿಂದ ಬಹಳ ನಿರೀಕ್ಷೆ ಹೊಂದಿದ್ದು, ದೇಶವು ಅರ್ಥಪೂರ್ಣ ಕೊಡುಗೆ ನೀಡಲು ಶಕ್ತಿ ಮತ್ತು ಪ್ರಭಾವ ಹೊಂದಿರಬೇಕು ಎಂದು ಅವರು ಹೇಳಿದರು.
ಅಧಿಕಾರವೆಂದರೆ ಕೇವಲ ಸಶಸ್ತ್ರ ಬಲವಲ್ಲ, ಬುದ್ಧಿಶಕ್ತಿ ಹಾಗೂ ತತ್ವಶಕ್ತಿಯೂ ಅದರ ಭಾಗವಾಗಿವೆ ಎಂದು ಅವರು ಒತ್ತಿ ಹೇಳಿದರು.




