ಉಜ್ಜಯಿನಿ: ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ಗೂ ಮುನ್ನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಶನಿವಾರ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಸೇರಿದಂತೆ ಅರುಂಧತಿ ಕಿರ್ಕಿರೆ, ಶೆಫಾಲಿ ವರ್ಮಾ, ರೇಣುಕಾ ಸಿಂಗ್ ಠಾಕೂರ್, ಶ್ರೇಯಾಂಕಾ ಪಾಟೀಲ್, ಕ್ರಾಂತಿ ಗೌಡ್, ಭಾರ್ತಿ ಫುಲ್ಮಾಲಿ, ಅರುಂಧತಿ ರೆಡ್ಡಿ ಮತ್ತು ದೀಪ್ತಿ ಶರ್ಮಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ಆಟಗಾರ್ತಿಯರು ಪರಂಪರಾಗತ ಭಸ್ಮ ಆರತಿಯಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಸಮಿತಿಯವರು ತಂಡದ ಸದಸ್ಯರನ್ನು ಸನ್ಮಾನಿಸಿದರು.
ಇದಕ್ಕೂ ಮೊದಲು ಕಳೆದ ವರ್ಷ ನಡೆದ ಮಹಿಳಾ ವಿಶ್ವಕಪ್ಗೂ ಮುನ್ನವೂ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಮಹಾಕಾಳ ದೇವರ ದರ್ಶನ ಪಡೆದಿದ್ದರು. ಆ ಟೂರ್ನಿಯಲ್ಲಿ ಹರ್ಮನ್ಪ್ರೀತ್ ನೇತೃತ್ವದ ಭಾರತ ತಂಡ ಪ್ರಶಸ್ತಿ ಜಯಿಸಿತ್ತು.
ಭಾರತೀಯ ಮಹಿಳಾ ತಂಡ ಈಗ ಇಂಗ್ಲೆಂಡ್ನಲ್ಲಿ ಜೂನ್ 12ರಿಂದ ಆರಂಭವಾಗಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ಗಾಗಿ ಸಿದ್ಧತೆ ನಡೆಸುತ್ತಿದೆ. ತಂಡವು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಅಭ್ಯಾಸ ನಡೆಸುತ್ತಿದೆ.
2026ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಗ್ರೂಪ್-1ರಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೆದರ್ಲ್ಯಾಂಡ್ಸ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.
ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 14ರಂದು ಬರ್ಮಿಂಗ್ಹ್ಯಾಮ್ನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ನಂತರ ಜೂನ್ 17ರಂದು ಲೀಡ್ಸ್ನಲ್ಲಿ ನೆದರ್ಲ್ಯಾಂಡ್ಸ್, ಜೂನ್ 21ರಂದು ಮ್ಯಾಂಚೆಸ್ಟರ್ನಲ್ಲಿ ದಕ್ಷಿಣ ಆಫ್ರಿಕಾ, ಜೂನ್ 25ರಂದು ಬಾಂಗ್ಲಾದೇಶ ಹಾಗೂ ಜೂನ್ 28ರಂದು ಲಾರ್ಡ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.
ಮಹಿಳಾ ಟಿ20 ಕ್ರಿಕೆಟ್ನಲ್ಲಿ ಭಾರತ ಇನ್ನೂ ವಿಶ್ವಕಪ್ ಪ್ರಶಸ್ತಿ ಗೆದ್ದಿಲ್ಲ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ರನ್ನರ್-ಅಪ್ ಆಗಿದ್ದೇ ತಂಡದ ಅತ್ಯುತ್ತಮ ಸಾಧನೆ. ಕಳೆದ ವರ್ಷ ತವರಿನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ ಇದೀಗ ಮೊದಲ ಟಿ20 ವಿಶ್ವಕಪ್ ಕಿರೀಟದ ಕನಸು ಕಾಣುತ್ತಿದೆ.




