Sunday, May 3, 2026

ಸ್ಥಳೀಯ ಉದ್ಯೋಗ, ಕಾರ್ಮಿಕರ ಗೌರವಯುತ ಬದುಕಿಗೆ ಆದ್ಯತೆ: ಅದಾನಿ ಗ್ರೂಪ್ ಹೊಸ ಬೆಳವಣಿಗೆ ತಂತ್ರ

ಅಹಮದಾಬಾದ್, : ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಸಂಸ್ಥೆಯ ಹೊಸ ಬೆಳವಣಿಗೆ ತಂತ್ರವನ್ನು ಪ್ರಕಟಿಸಿದ್ದು, ಸ್ಥಳೀಯ ಉದ್ಯೋಗ ಸೃಷ್ಟಿ, ಕಾರ್ಮಿಕರ ಕಲ್ಯಾಣ ಹಾಗೂ ಗೌರವಯುತ ಜೀವನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ 24 ರಾಜ್ಯಗಳಲ್ಲಿ 700ಕ್ಕೂ ಹೆಚ್ಚು ಆಸ್ತಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅದಾನಿ ಗ್ರೂಪ್‌ನಲ್ಲಿ ಸುಮಾರು 4 ಲಕ್ಷ ಉದ್ಯೋಗಿಗಳು, ಪಾಲುದಾರರು ಮತ್ತು ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

“ನೀವು ಕೇವಲ ಉದ್ಯೋಗಿಗಳಲ್ಲ, ರಾಷ್ಟ್ರ ನಿರ್ಮಾತೃಗಳು. ನಾವು ಒಂದು ಯೋಜನೆ ಪೂರ್ಣಗೊಳಿಸುವಾಗ ಕೇವಲ ಕೆಲಸ ಮಾಡುತ್ತಿಲ್ಲ, ದೇಶದ ಭವಿಷ್ಯ ರೂಪಿಸುತ್ತಿದ್ದೇವೆ,” ಎಂದು ಗೌತಮ್ ಅದಾನಿ ಹೇಳಿದರು.

ಸ್ಥಳೀಯರಿಗೆ ಮೊದಲ ಆದ್ಯತೆ

ಹೊಸ ಯೋಜನೆಗಳ ಸ್ಥಳಗಳಲ್ಲಿ ಉದ್ಯೋಗ ನೀಡುವಾಗ ಮೊದಲಿಗೆ ಸುತ್ತಮುತ್ತಲಿನ ಸ್ಥಳೀಯ ಸಮುದಾಯದವರಿಗೆ, ಬಳಿಕ ರಾಜ್ಯದ ಅಭ್ಯರ್ಥಿಗಳಿಗೆ, ಅಗತ್ಯವಿದ್ದರೆ ಹೊರರಾಜ್ಯದವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಮಿಕರ ವಸತಿ ಮತ್ತು ಆಹಾರ ಸೌಲಭ್ಯ

ಗುಜರಾತ್‌ನ ಮುಂದ್ರಾ ಮತ್ತು ಖಾವಡಾ ಪ್ರದೇಶಗಳಲ್ಲಿ 50 ಸಾವಿರ ಕಾರ್ಮಿಕರಿಗೆ ಏರ್‌ಕಂಡೀಷನ್ ವಸತಿ ನಿರ್ಮಿಸಲಾಗುತ್ತಿದೆ. ಜೊತೆಗೆ ಮುಂದ್ರಾದಲ್ಲಿ ದಿನಕ್ಕೆ 1 ಲಕ್ಷ ಪೌಷ್ಟಿಕ ಊಟ ಪೂರೈಸುವ ಕೇಂದ್ರಿಕೃತ ಕ್ಲೌಡ್ ಕಿಚನ್ ಸ್ಥಾಪಿಸಲಾಗುತ್ತಿದೆ.

“ಇದು ಸೌಲಭ್ಯವಲ್ಲ, ಅವಶ್ಯಕತೆ. ಪ್ರತಿಯೊಬ್ಬ ಕಾರ್ಮಿಕನಿಗೂ ಗೌರವದಿಂದ ಬದುಕುವ ಮತ್ತು ಕೆಲಸ ಮಾಡುವ ಹಕ್ಕಿದೆ,” ಎಂದರು.

ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯಲ್ಲಿ ಬದಲಾವಣೆ

ಸಂಸ್ಥೆಯಲ್ಲಿ ಮೂರು ಹಂತದ ಆಡಳಿತ ಮಾದರಿಯನ್ನು ಜಾರಿಗೆ ತಂದು ತ್ವರಿತ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ತರಲಾಗುತ್ತಿದೆ. ಯೋಜನಾ ಸ್ಥಳದಲ್ಲೇ ಗಂಟೆಗಳೊಳಗೆ ತೀರ್ಮಾನ ಕೈಗೊಳ್ಳಲು ಇದು ನೆರವಾಗಲಿದೆ.

ಗುತ್ತಿಗೆದಾರರೊಂದಿಗೆ ದೀರ್ಘಕಾಲೀನ ಪಾಲುದಾರಿಕೆ

ದೊಡ್ಡ ಹಾಗೂ ವಿಶ್ವಾಸಾರ್ಹ ಗುತ್ತಿಗೆದಾರರೊಂದಿಗೆ ದೀರ್ಘಕಾಲೀನ ಒಪ್ಪಂದ ಮಾಡಿಕೊಂಡು ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.

ಕೌಶಲ್ಯಾಭಿವೃದ್ಧಿಗೆ ಒತ್ತು

‘ಅದಾನಿ ಸ್ಕಿಲ್ಸ್ ಸೆಂಟರ್’ ಮೂಲಕ ಅಪ್ರಶಿಕ್ಷಿತ ಕಾರ್ಮಿಕರನ್ನು ಪರಿಣಿತ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ನಾಯಕತ್ವ ಹುದ್ದೆಗಳಿಗೆ ಬೆಳೆಸುವ ಯೋಜನೆ ರೂಪಿಸಲಾಗಿದೆ.

ರಾಷ್ಟ್ರಾಭಿವೃದ್ಧಿಗೆ ಯೋಜನೆಗಳು

ಮುಂದ್ರಾ ಬಂದರು, ಖಾವಡಾ ನವೀಕರಿಸಬಹುದಾದ ಶಕ್ತಿ ಪಾರ್ಕ್, ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗಳು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗುತ್ತಿವೆ ಎಂದು ಗೌತಮ್ ಅದಾನಿ ಹೇಳಿದರು.

“ಈ ಯೋಜನೆಗಳು ಕೇವಲ ಆಸ್ತಿಗಳಲ್ಲ, ರಾಷ್ಟ್ರ ಪ್ರಗತಿಯ ಸಾಧನಗಳು,” ಎಂದು ಅವರು ಹೇಳಿದರು.

More like this
Related

ಕೊಡವೂರು ದೇವಸ್ಥಾನದಲ್ಲಿ ಮಹಾರುದ್ರಯಾಗದ ಪೂರ್ವ ಭಾವಿಯಾಗಿ ಚಪ್ಪರ ಮುಹೂರ್ತ

ಮಲ್ಪೆ: ಇಲ್ಲಿನ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ, ನಾಡಿನ ಜನರ...

ಬಿಧಾನನಗರ ಎಣಿಕೆ ಕೇಂದ್ರದ ಹೊರಗೆ ಟಿಎಂಸಿ-ಬಿಜೆಪಿ ಕಾರ್ಯಕರ್ತರ ಘರ್ಷಣೆ

ಕೋಲ್ಕತ್ತಾ, : ಪಶ್ಚಿಮ ಬಂಗಾಳದ ಉತ್ತರ 24 ಪರಗಣಾ ಜಿಲ್ಲೆಯ ಬಿಧಾನನಗರ...

ಥಾಮಸ್ ಕಪ್: ಫ್ರಾನ್ಸ್ ವಿರುದ್ಧ ಭಾರತಕ್ಕೆ 0-3 ಸೋಲು, ಕಂಚಿನ ಪದಕಕ್ಕೆ ತೃಪ್ತಿ

ಹಾರ್ಸೆನ್ಸ್ (ಡೆನ್ಮಾರ್ಕ್), : ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ...

ಶೃಂಗೇರಿ : ಮರು ಮತ ಎಣಿಕೆಯಲ್ಲೂ ಜಯ ಸಾಧಿಸಿದ ಕಾಂಗ್ರೆಸ್ ನ ಟಿ ಡಿ ರಾಜೇಗೌಡ, ಬಿಜೆಪಿಯ ಜೀವರಾಜ್ ಗೆ ಮುಖಭಂಗ

ಚಿಕ್ಕಮಗಳೂರು: ಅತ್ಯಂತ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ   2023ರ ವಿಧಾನಸಭಾ...

Copying is disabled on Udupi Digital News.