ಅಹಮದಾಬಾದ್, : ಗುಜರಾತ್ ಟೈಟನ್ಸ್ ವಿರುದ್ಧದ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್, ವಿಕೆಟ್ಗಳನ್ನು ಗುಂಪು ಗುಂಪಾಗಿ ಕಳೆದುಕೊಂಡದ್ದೇ ಸೋಲಿನ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 19.2 ಓವರ್ಗಳಲ್ಲಿ 155 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಗುಜರಾತ್ ಟೈಟನ್ಸ್ 15.5 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ನಾಲ್ಕು ವಿಕೆಟ್ ಜಯ ಸಾಧಿಸಿತು. ಆರ್ಸಿಬಿ ಪರ ವಿರಾಟ್ ಕೊಹ್ಲಿ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿ 13 ಎಸೆತಗಳಲ್ಲಿ 28 ರನ್ ಗಳಿಸಿದರು. ದೇವದತ್ ಪಡಿಕ್ಕಲ್ 40 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು.
“ವಿರಾಟ್ ಅದ್ಭುತವಾಗಿ ಆರಂಭಿಸಿದರು. ಅದು ಹಳೆಯ ವಿರಾಟ್ ಕೊಹ್ಲಿಯ ಆಟವನ್ನು ನೆನಪಿಸಿತು. ವಿಶೇಷವಾಗಿ ರಬಾಡಾ ವಿರುದ್ಧ ಆಡಿದ ಶಾಟ್ಗಳು ಅತ್ಯುತ್ತಮವಾಗಿದ್ದವು,” ಎಂದು ಕಾರ್ತಿಕ್ ಹೇಳಿದರು. “ಆದರೆ ನಾವು ನಿರಂತರವಾಗಿ ವಿಕೆಟ್ ಕಳೆದುಕೊಂಡೆವು. ಪ್ರತಿ ಬಾರಿ ಉತ್ತಮ ಜೊತೆಯಾಟ ಕಟ್ಟುವ ಅವಕಾಶ ಬಂದಾಗಲೇ ವಿಕೆಟ್ ಕಳೆದುಕೊಂಡೆವು. ಟಿ20 ಪಂದ್ಯದಲ್ಲಿ ಇದು ಯಾವತ್ತೂ ಸಹಾಯ ಮಾಡುವುದಿಲ್ಲ,” ಎಂದು ಅವರು ಅಭಿಪ್ರಾಯಪಟ್ಟರು. ಸೋಲಿನ ನಡುವೆಯೂ ಬೌಲರ್ಗಳ ಹೋರಾಟ ಮೆಚ್ಚುವಂತಿತ್ತು ಎಂದು ಕಾರ್ತಿಕ್ ಹೇಳಿದರು.
“ತಂಡದ ಬೌಲರ್ಗಳು ಒಟ್ಟಾಗಿ ಹೋರಾಡಿದರು. ಮಧ್ಯ ಓವರ್ಗಳಲ್ಲಿ ಎದುರಾಳಿಗೆ ಒತ್ತಡ ತಂದರು. ಕೆಲವು ಕ್ಷಣಗಳು ನಮ್ಮ ಪರವಾಗಿದ್ದರೆ ಫಲಿತಾಂಶ ಬದಲಾಗಬಹುದಿತ್ತು,” ಎಂದು ಹೇಳಿದರು. ಆರ್ಸಿಬಿ ಪ್ರಸ್ತುತ 9 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಮೇ 7ರಂದು ಲಖ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ.




