Friday, May 15, 2026

ಆಂಧ್ರ ಪ್ರದೇಶದಲ್ಲಿ ಖಾಸಗಿ ಬಸ್‌ಗೆ ಬೆಂಕಿ; 36 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಅಮರಾವತಿ, : ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಖಾಸಗಿ ಟ್ರಾವೆಲ್ಸ್ ಬಸ್‌ಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ 36 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಉಲವಪಾಡು ಮಂಡಲದ ಭೀಮವರಂ ಅಡ್ಡರಸ್ತೆ ಬಳಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್ ಹೈದರಾಬಾದ್‌ನಿಂದ ತಿರುಪತಿಗೆ ತೆರಳುತ್ತಿತ್ತು. ಈ ವೇಳೆ ಎಂಜಿನ್ ಭಾಗದಿಂದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದಾನೆ. ತಕ್ಷಣ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾನೆ.

ಪ್ರಯಾಣಿಕರೆಲ್ಲರೂ ಬಸ್‌ನಿಂದ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಸಂಪೂರ್ಣವಾಗಿ ವಾಹನವನ್ನು ಆವರಿಸಿತು. ಎಲ್ಲರೂ ಸುರಕ್ಷಿತವಾಗಿ ಇಳಿದಿದ್ದರಿಂದ ಭಾರೀ ಅನಾಹುತ ತಪ್ಪಿತು.

ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಆದರೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಸ್ ಬೆಂಕಿ ಅವಘಡಗಳು ಹೆಚ್ಚಾಗಿವೆ.

ಕಳೆದ ಏಪ್ರಿಲ್ 27ರಂದು ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಖಾಸಗಿ ಟ್ರಾವೆಲ್ಸ್ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಆ ವೇಳೆ ಬಸ್‌ನಲ್ಲಿ ಪ್ರಯಾಣಿಕರು ಇರಲಿಲ್ಲ. ಚಾಲಕ ಮತ್ತು ಮತ್ತೊಬ್ಬ ವ್ಯಕ್ತಿ ಬೆಂಕಿ ಕಾಣುತ್ತಿದ್ದಂತೆಯೇ ವಾಹನದಿಂದ ಇಳಿದು ಪಾರಾಗಿದ್ದರು.

ಮಾರ್ಚ್ 26ರಂದು ಆಂಧ್ರ ಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ ಖಾಸಗಿ ಬಸ್ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿದ್ದ ಪರಿಣಾಮ ಕನಿಷ್ಠ 14 ಮಂದಿ ಸಜೀವ ದಹನಗೊಂಡಿದ್ದರು ಮತ್ತು 15 ಮಂದಿ ಗಾಯಗೊಂಡಿದ್ದರು.

ಇದೇ ರೀತಿ 2025ರ ಅಕ್ಟೋಬರ್ 24ರಂದು ಕರುನೂಲಿನ ಹೊರವಲಯದ ಚಿನ್ನತೇಕೂರು ಗ್ರಾಮದ ಬಳಿ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 19 ಮಂದಿ ಸಾವನ್ನಪ್ಪಿದ್ದರು. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಅಪಘಾತಕ್ಕೀಡಾದ ಬೈಕ್ ಮೇಲಿಂದ ಹರಿದ ಬಳಿಕ ಬೆಂಕಿ ಕಾಣಿಸಿಕೊಂಡಿತ್ತು.

ಇನ್ನು 2025ರ ನವೆಂಬರ್ 3ರಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 19 ಮಂದಿ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದರು.

More like this
Related

ಹಿಂದೂ ಚಿಹ್ನೆಗಳು, ಸಂಪ್ರದಾಯಗಳ ವಿರುದ್ಧ ಸಿದ್ದರಾಮಯ್ಯರಿಗೆ ಅಸಹಿಷ್ಣುತೆ: ಕರ್ನಾಟಕ ಬಿಜೆಪಿ ವಾಗ್ದಾಳಿ

ಬೆಂಗಳೂರು, : ಶಾಲೆ ಮತ್ತು ಕಾಲೇಜುಗಳಲ್ಲಿ ಕೇಸರಿ ಶಾಲು ಹಾಗೂ ತಲೆಪಾಗೆ...

ಜವಳಿ ಕ್ಷೇತ್ರ ಸಂಕಷ್ಟ: ಹತ್ತಿ ಆಮದು ಸುಂಕ ರದ್ದುಪಡಿಸಲು ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

ಚೆನ್ನೈ, : ತಮಿಳುನಾಡು ಮುಖ್ಯಮಂತ್ರಿಸಿ. ಜೋಸೆಫ್ ವಿಜಯ್ ಅವರು ಹತ್ತಿ ಆಮದು...

ಯುಎಇ ಪ್ರವಾಸಕ್ಕೆ ಪ್ರಧಾನಿ ಮೋದಿ ಪ್ರಯಾಣ; ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಜೊತೆ ಮಹತ್ವದ ಮಾತುಕತೆ

ನವದೆಹಲಿ, : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯುನೈಟೆಡ್ ಅರಬ್...

ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆ ವಿರೋಧಿಸಬೇಕಲ್ವಾ? ಹಿಜಾಬ್ ವಿರೋಧಿಸಿದ ಬಿಜೆಪಿಗರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಸಂವಿಧಾನದ ಆಶಯವಾಗಿರುವ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ...

Copying is disabled on Udupi Digital News.