ಜೈಪುರ: ಪ್ರಶ್ನೆ ಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ನೀಟ್-2026 ಪರೀಕ್ಷೆಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಕೆಲವೇ ದಿನಗಳಲ್ಲಿ, ರಾಜಸ್ಥಾನದ ಸಿಕರ್ನಲ್ಲಿ 23 ವರ್ಷದ ನೀಟ್ ಅಭ್ಯರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಪ್ರದೀಪ್ ಮಾಹಿಚ್ ಎಂದು ಗುರುತಿಸಲಾಗಿದೆ. ಅವರು ಸಿಕರ್ನ ಪಿಪ್ರಾಲಿ ರಸ್ತೆಯಲ್ಲಿರುವ ಜಲಧಾರಿ ನಗರ ಪ್ರದೇಶದ ಬಾಡಿಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂಲತಃ ಜುಂಜುನು ಜಿಲ್ಲೆಯ ಹಳ್ಳಿಯೊಂದರ ನಿವಾಸಿ ಪ್ರದೀಪ್, ಮೂರು ವರ್ಷಗಳಿಂದ ಸಿಕರ್ನಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಪ್ರದೀಪ್ ನೀಟ್-ಪದವಿ 2026ರಲ್ಲಿ 650ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸುತ್ತಿದ್ದರು. ಈ ಅಂಕಗಳು ಬಂದರೆ ತನಗೆ ಯಾವುದೇ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಬಹುದೆಂದು ಅವರು ನಂಬಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಂತರ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಪರೀಕ್ಷೆಯನ್ನು ರದ್ದುಗೊಳಿಸಿದಾಗಿನಿಂದ ಅವರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು ಎಂದು ಅವರ ಸಂಬಂಧಿಕರು ಹೇಳಿದ್ದಾರೆ.
ಕುಟುಂಬದ ಏಕೈಕ ಪುತ್ರನಾಗಿದ್ದ ಪ್ರದೀಪ್, ರೈಲ್ವೆ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ತನ್ನಿಬ್ಬರು ಸಹೋದರಿಯರೊಂದಿಗೆ ಸಿಕರ್ನಲ್ಲಿ ವಾಸಿಸುತ್ತಿದ್ದರು ಎಂದು ಅವರ ತಂದೆ ರಾಜೇಶ್ ಕುಮಾರ್ ಮೇಘವಾಲ್ ತಿಳಿಸಿದ್ದಾರೆ.
ಪೊಲೀಸರು ಮತ್ತು ಕುಟುಂಬಸ್ಥರ ಪ್ರಕಾರ, ಈ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಪ್ರದೀಪ್ ಅವರ ಕಿರಿಯ ತಂಗಿ ಕೋಚಿಂಗ್ ಕ್ಲಾಸ್ಗೆ ಹೋಗಿದ್ದರು. ಹಿರಿಯ ತಂಗಿ ಬಚ್ಚಲುಮನೆಯಲ್ಲಿದ್ದಾಗ, ಪ್ರದೀಪ್ ಕೋಣೆಯ ಒಳಗಡೆ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯವಸ್ಥೆ ಮಾಡಿದ ಕೊಲೆ: ರಾಹುಲ್ ಗಾಂಧಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ದೇಶಾದ್ಯಂತ ನೀಟ್ ಪರೀಕ್ಷಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕೇಂದ್ರ ಸರಕಾರವೇ ಹೊಣೆಯಾಗಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ 21 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಇದು ‘‘ವ್ಯವಸ್ಥೆ ಮಾಡಿದ ಕೊಲೆ’’ ಎಂದು ಹೇಳಿದರು.
‘‘ಈ ಯುವಕರು ಪರೀಕ್ಷೆಯಲ್ಲಿ ಸೋಲಲಿಲ್ಲ. ಅವರನ್ನು ಭಷ್ಟ ವ್ಯವಸ್ಥೆ ಕೊಂದಿದೆ. ಅದು ಆತ್ಮಹತ್ಯೆಯಲ್ಲ, ಅದು ವ್ಯವಸ್ಥೆಯೇ ನಡೆಸಿದ ಕೊಲೆ’’ ಎಂಬುದಾಗಿ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.




