ಯುಡಿ ನ್ಯೂಸ್ ಡಾಟ್ ಕಾಮ್
ಬೆಳಗಾವಿ: ತಿಂಗಳ ಹಿಂದಷ್ಟೇ ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದ್ದ ಹುಬ್ಬಳ್ಳಿ ಮರ್ಯಾದಾ ಹತ್ಯೆ ಪ್ರಕರಣ ನೆನಪು ಮಾಸುವ ಮುನ್ನವೇ ಇದೀಗ ಬೆಳಗಾವಿಯಲ್ಲಿ ಮತ್ತೊಂದು ಅಂಥಹುದೇ ಪ್ರಕರಣ ಬೆಳಕಿಗೆ ಬಂದಿದೆ. ಪ್ರಿಯಕರನ ಜೊತೆ ಹೋಗಿದ್ದಕ್ಕೆ ಸಂಬಂಧಿಕರೇ ಯುವತಿಗೆ ವಿಷ ಕುಡಿಸಿ ಕೊಂದು ಹಾಕಿರುವ ಆಘಾತಕಾರಿ ಘಟನೆಯೊಂದು ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನಲ್ಲಿ ನಡೆದಿದೆ.
ಸತ್ಯವ್ವ ಎಂಬಾಕೆ ಫೆಬ್ರವರಿ 17ರಂದು ಪ್ರಿಯಕರ ಕೃಷ್ಣನ ಜೊತೆಗೆ ಹೋಗಿದ್ದು, ಸೌದತ್ತಿ ತಾಲೂಕಿನ ಬೆಳವಡಿಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸಿಸುತ್ತಿದ್ದರು. 15 ದಿನಗಳ ಬಳಿಕ ಇಬ್ಬರನ್ನೂ ಕುಟುಂಬದ ಸದಸ್ಯರು ಕರೆ ತಂದು ಎರಡು ಕುಟುಂಬಸ್ಥರ ನಡುವೆ ರಾಜಿ ಸಂಧಾನ ನಡೆದಿತ್ತು. ಬಳಿಕ ಸತ್ಯವ್ವಳ ಅಣ್ಣ ಆಕೆಯನ್ನು ಕರೆದುಕೊಂಡು ಬಂದು ಮಹಾರಾಷ್ಟ್ರದ ಶಿರೋಳದಲ್ಲಿರುವ ಸತ್ಯವ್ವನ ಅಕ್ಕನ ಮನೆಗೆ ಕಳುಹಿಸಿದ್ದಾರೆ.
ಕೃಷ್ಣ ಪಾಟೀಲ್ನನ್ನು ಮರೆತು ಬಿಡುವಂತೆ ಸತ್ಯವ್ವಳಿಗೆ ಕುಟುಂಬದವರು ಒತ್ತಡ ಹೇರಿದ್ದು, ಇದಕ್ಕೆ ಆಕೆ ಒಪ್ಪದಿದ್ದಾಗ ಅರಗ ಗ್ರಾಮಕ್ಕೆ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ. ಮಾರ್ಚ್ 21ರಂದು ವಿಷ ಕುಡಿಸಿ ಸತ್ಯವ್ವನ ಕೊಲೆಗೈದು, ದೇಹವನ್ನು ಸುಟ್ಟು ಹಾಕಿದ್ದಾರೆ. ಸತ್ಯವ್ವನ ಅಣ್ಣ ಶಾನೂರ, ಚಿಕ್ಕಪ್ಪ ಪ್ರಕಾಶ, ಭಾವ ಕಲ್ಲಪ್ಪ ಸೇರಿ ಈ ಕೃತ್ಯ ನಡೆಸಿದ್ದು, ಬಳಿಕ ಗ್ರಾಮದ ಸ್ಮಶಾನದಲ್ಲಿ ಶವವನ್ನು ಸುಟ್ಟು ಹಾಕಿದ್ದಾರೆ. ಸಾಕ್ಷಿ ನಾಶಕ್ಕಾಗಿ ಆಕೆಯ ಹಾಸಿಗೆ ಬಟ್ಟೆ ಸಮೇತ ಶವವನ್ನು ಸುಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಶವ ಸುಟ್ಟು ಮೂವರೂ ವಾಪಸ್ ಊರಿಗೆ ಬಂದಿದ್ದಾರೆ.
ಸತ್ಯವ್ವ ಸಂಪರ್ಕಕ್ಕೆ ಸಿಗದಿದ್ದಾಗ ಪ್ರಿಯಕರ ಕೃಷ್ಣ ಸಂಶಯಗೊಂಡಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಕೃಷ್ಣನ ದೂರಿನ ಅನ್ವಯ ಸಿಪಿಐ ಜಾವೇದ್ ಮುಶಪೂರಿ ತನಿಖೆ ಕೈಗೊಂಡಿದ್ದರು. ಶಾನೂರನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ, ತಂಗಿ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಕ್ಕೆ ಕೊಲೆ ಮಾಡಿದ್ದೇವೆ ಎಂದು ಆಕೆಯ ಅಣ್ಣ ತಪ್ಪು ಒಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಶಾನೂರ ಪ್ರಕಾಶ ಮತ್ತು ಕಲ್ಲಪ್ಪನನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ.
ರಾಜ್ಯ ಸರ್ಕಾರ ಮರ್ಯಾದಾ ಹತ್ಯೆ ತಡೆ ಕಾನೂನು ಜಾರಿ ಮಾಡಿದ್ದರೂ ಇದೀಗ ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ ನಡೆದಿರುವುದು ಆತಂಕಕ್ಕೆಡೆಮಾಡಿಕೊಟ್ಟಿದೆ.




