ಬೆಂಗಳೂರು: ಧಾರಾವಾಹಿಯೊಂದರ ಚಿತ್ರೀಕರಣಕ್ಕಾಗಿ ಅಗ್ರಿಮೆಂಟ್ ಮಾಡಿಕೊಂಡು ಹಣ ಪಾವತಿಸದೇ ವಂಚಿಸಿದ್ದಾರೆ ಎಂದು ಆರೋಪಿಸಿ ನಟ ಕಿಚ್ಚ ಸುದೀಪ್ ಹಾಗೂ ಅವರ ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ಕಾಫಿ ತೋಟದ ಇಬ್ಬರು ಮಾಲೀಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ದೂರುದಾರ ದೀಪಕ್ ಅವರ ಹೇಳಿಕೆಯಂತೆ, ‘ವಾರಸ್ದಾರ’ ಎಂಬ ಧಾರಾವಾಹಿಗಾಗಿ ತಮ್ಮ ಮನೆ ಮತ್ತು ಕಾಫಿ ತೋಟದಲ್ಲಿ ಚಿತ್ರೀಕರಣ ನಡೆಸಲು ಎರಡು ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಚಿತ್ರೀಕರಣ ಆರಂಭವಾದ ಕೆಲವೇ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು. ಜೊತೆಗೆ ಚಿತ್ರೀಕರಣದ ವೇಳೆ ಕಾಫಿ ತೋಟ ಮತ್ತು ಮರಗಳಿಗೆ ಹಾನಿ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಒಪ್ಪಂದದ ಪ್ರಕಾರ ರೂ.95 ಲಕ್ಷ ಪರಿಹಾರ ನೀಡಬೇಕಾಗಿದ್ದು, ಈ ಕುರಿತು ಈ ಹಿಂದೆ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ್ ವಿರುದ್ಧ ದೂರು ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ಸುದೀಪ್ ಅವರು ರೂ.60 ಲಕ್ಷ ಪಾವತಿಸುವ ಭರವಸೆ ನೀಡಿದ್ದರಿಂದ ದೂರು ಹಿಂಪಡೆಯಲಾಗಿತ್ತು ಎಂದು ದೀಪಕ್ ತಿಳಿಸಿದ್ದಾರೆ.
ಆದರೆ ನಂತರ ಕೇವಲ ರೂ.10 ಲಕ್ಷದ ಚೆಕ್ ನೀಡಲಾಗಿದ್ದು, ಉಳಿದ ಮೊತ್ತವನ್ನು ಪಾವತಿಸದೇ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ನಟ ಕಿಚ್ಚ ಸುದೀಪ್ ಹಾಗೂ ಅವರ ಮ್ಯಾನೇಜರ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಈ ದೂರು ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.




