Thursday, September 17, 2026

ಕಸ್ತೂರಿ ರಂಗನ್ ಅಧಿಸೂಚನೆ ಜತೆಗೆ 2017ರ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಯನ್ನೂ ಹಿಂಪಡೆಯಲಿ

ಏಳನೇ ಅಧಿಸೂಚನೆ ವಿರೋಧ ಮಾತ್ರ ಸಾಕಾಗದು: ಟಿ.ಬಿ. ಶೆಟ್ಟಿ

ಕುಂದಾಪುರ: ಕಸ್ತೂರಿ ರಂಗನ್ ವರದಿಯ ಶಿಫಾರಸ್ಸಿನ ಆಧಾರದ ಮೇಲೆ ಕೇಂದ್ರ ಸರಕಾರ ಹೊರಡಿಸಿರುವ ಏಳನೇ ಅಧಿಸೂಚನೆಯ ಜತೆಗೆ, 2017ರಲ್ಲಿ ಕೊಲ್ಲೂರು ಮತ್ತು ಸೋಮೇಶ್ವರ ವನ್ಯಜೀವಿ ಅಭಯಾರಣ್ಯಗಳ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡು ಘೋಷಿಸಲಾಗಿರುವ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯನ್ನೂ ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದು ವಕೀಲ ಟಿ.ಬಿ. ಶೆಟ್ಟಿ ಆಗ್ರಹಿಸಿದ್ದಾರೆ.

ಸೆ.18ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಬ್ರಿಗೆ ಆಗಮಿಸಿ ಕಸ್ತೂರಿ ರಂಗನ್ ವರದಿಯ ಶಿಫಾರಸ್ಸಿನ ಆಧಾರದ ಮೇಲೆ ಕೇಂದ್ರ ಸರಕಾರ ಹೊರಡಿಸಿರುವ ಏಳನೇ ಅಧಿಸೂಚನೆಯ ಬಾಧಕಗಳ ಕುರಿತು ಸಾರ್ವಜನಿಕ ಅಹವಾಲು ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೇವಲ ಏಳನೇ ಅಧಿಸೂಚನೆಯನ್ನಷ್ಟೇ ವಿರೋಧಿಸದೆ, 2017ರ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯ ಬಗ್ಗೆಯೂ ಗಮನಹರಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಏಳನೇ ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಮಾಡಿ ಕೆಲವು ಚಟುವಟಿಕೆಗಳನ್ನು ನಿಷೇಧಿಸುವ ಹಾಗೂ ನಿಯಂತ್ರಿಸುವ ಕುರಿತು ಚರ್ಚೆಯಾಗುತ್ತಿದೆ. ಆದರೆ, 2017ರಲ್ಲಿ ಘೋಷಿಸಲಾದ ಪರಿಸರ ಸೂಕ್ಷ್ಮ ವಲಯದಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಚಟುವಟಿಕೆಗಳಿಗೆ ನಿರ್ಬಂಧ ಹಾಗೂ ನಿಯಂತ್ರಣಗಳಿವೆ. ಕಟ್ಟಡ ನಿರ್ಮಾಣ, ರಸ್ತೆ, ಹೋಟೆಲ್, ರೆಸಾರ್ಟ್, ವಾಹನ ಸಂಚಾರ, ಬಾವಿ, ಬೋರ್‌ವೆಲ್ ಸೇರಿದಂತೆ ಹಲವು ಚಟುವಟಿಕೆಗಳಿಗೆ ನಿಷೇಧ ಅಥವಾ ನಿಯಂತ್ರಣ ವಿಧಿಸಲಾಗಿದೆ. ಪರಿಸರ ಸೂಕ್ಷ್ಮ ವಲಯದಿಂದ ಒಂದು ಕಿ.ಮೀ. ವ್ಯಾಪ್ತಿಯವರೆಗೂ ಈ ನಿಯಂತ್ರಣಗಳು ಅನ್ವಯಿಸುತ್ತವೆ ಎಂದು ಅವರು ಹೇಳಿದ್ದಾರೆ.

2017ರಿಂದ ಇತ್ತೀಚಿನವರೆಗೂ ಈ ಅಧಿಸೂಚನೆಯ ಕುರಿತು ಅಧಿಕಾರಿಗಳು ಹೆಚ್ಚಿನ ಗಮನಹರಿಸಿರಲಿಲ್ಲ. ಆದರೆ, ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ಏಳನೇ ಅಧಿಸೂಚನೆಯ ವಿರುದ್ಧ ಸಾರ್ವಜನಿಕ ಪ್ರತಿರೋಧ ವ್ಯಕ್ತವಾದ ಬಳಿಕ, 2017ರ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯನ್ನು ಮುಂದಿಟ್ಟುಕೊಂಡು ಭೂ ಪರಿವರ್ತನೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಟಿ.ಬಿ. ಶೆಟ್ಟಿ ಆರೋಪಿಸಿದ್ದಾರೆ.

2017ರಲ್ಲಿ ಪರಿಸರ ಸೂಕ್ಷ್ಮ ವಲಯ ಘೋಷಣೆಯಾದ ಸಂದರ್ಭದಲ್ಲಿ ಆಗಿನ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಅಧಿಸೂಚನೆಯನ್ನು ಅಧ್ಯಯನ ಮಾಡಿ, ಅದರಲ್ಲಿರುವ ಹಲವು ನಿಯಂತ್ರಣಗಳನ್ನು ಕೈಬಿಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಇತರ ಜನಪ್ರತಿನಿಧಿಗಳು ಈ ವಿಚಾರದ ಬಗ್ಗೆ ಗಮನಹರಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದ ಏಳನೇ ಅಧಿಸೂಚನೆಯನ್ನು ಮಾತ್ರ ವಿರೋಧಿಸಲಾಗುತ್ತಿದೆ. ಆದರೆ, ಏಳನೇ ಅಧಿಸೂಚನೆಯ ಪರಿಸರ ಸೂಕ್ಷ್ಮ ಪ್ರದೇಶ ಮತ್ತು 2017ರ ಅಧಿಸೂಚನೆಯ ಪರಿಸರ ಸೂಕ್ಷ್ಮ ವಲಯಗಳು ಹೆಚ್ಚು ಕಡಿಮೆ ಒಂದೇ ಭೂ ಪ್ರದೇಶಗಳನ್ನು ಒಳಗೊಂಡಿವೆ. ಹೀಗಾಗಿ ಏಳನೇ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಮಾಡಿದರೂ, 2017ರ ಅಧಿಸೂಚನೆಯಲ್ಲಿರುವ ನಿರ್ಬಂಧಗಳು ಮುಂದುವರಿಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಆದ್ದರಿಂದ, ಏಳನೇ ಅಧಿಸೂಚನೆಯೊಂದಿಗೆ 2017ರ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯನ್ನೂ ಹಿಂಪಡೆಯುವಂತೆ ಮುಖ್ಯಮಂತ್ರಿಗಳ ಮುಂದೆ ಒತ್ತಾಯಿಸಬೇಕು. ಇಲ್ಲದಿದ್ದರೆ, ಕೇವಲ ಏಳನೇ ಅಧಿಸೂಚನೆ ವಿರೋಧಿಸಿ ನಡೆಸುವ ಹೋರಾಟದಿಂದ ನಿರೀಕ್ಷಿತ ಪ್ರಯೋಜನ ದೊರೆಯುವುದಿಲ್ಲ ಎಂದು ಟಿ.ಬಿ. ಶೆಟ್ಟಿ ತಿಳಿಸಿದ್ದಾರೆ.

More like this
Related

ತೊಟ್ಟಂ ಗಣೇಶೋತ್ಸವದಲ್ಲಿ ಸೌಹಾರ್ದತೆಯ ಸಂದೇಶ: ಚರ್ಚ್ ಪ್ರತಿನಿಧಿಗಳಿಂದ ಪರಸ್ಪರ ಶುಭಾಶಯ ವಿನಿಮಯ

ಮಲ್ಪೆ: ಕೋಮು ಸೌಹಾರ್ದತೆ, ಪರಸ್ಪರ ಗೌರವ ಹಾಗೂ ಸ್ನೇಹದ ಸಂದೇಶ ಸಾರುವ...

ಮಣಿಪಾಲದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಕಿರುಕುಳ, ಬ್ಲ್ಯಾಕ್ ಮೇಲ್ ಮಾಡಿದ ಯುವಕನ ಬಂಧನ

ಉಡುಪಿ: ಮಣಿಪಾಲದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಕ್ಕೆ...

ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಸಚಿವ ಕೆ.ಎಸ್. ಬಸವಂತಪ್ಪ ರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸ್ವಾಗತ

ಉಡುಪಿ: ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು...

Copying is disabled on Udupi Digital News.