ಉಡುಪಿ: ಶ್ರೀವಾಮನ ತೀರ್ಥ ಪರಂಪರೆಯ ಶೀರೂರು ಮಠದ ವೇದವರ್ಧನತೀರ್ಥ ಶ್ರೀಪಾದರ ಶ್ರೀಕೃಷ್ಣ ದೇವರ ಪೂಜಾ ಕೈಂಕರ್ಯದ ಪ್ರಥಮ ದೈವಾರ್ಷಿಕ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಹೋತ್ಸವವನ್ನು ಬರಮಾಡಿಕೊಳ್ಳಲು ಉಡುಪಿ ನಗರ ಸಿದ್ದಗೊಂಡಿದೆ.



ಶೀರೂರು ಮಠವು ಸುಣ್ಣಬಣ್ಣಗಳಿಂದ ಅಲಂಕಾರಗೊಂಡು, ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ. ಸಂಪ್ರದಾಯದಂತೆ ತೀರ್ಥ ಕ್ಷೇತ್ರಗಳಿಗೆ ಸಂಚಾರ ನಡೆಸಿದ್ದ ಶೀರೂರು ಶ್ರೀಪಾದರು ಮರಳಿ ಬಂದಿದ್ದು, ಪುರಪ್ರವೇಶ ಅದ್ದೂರಿಯಾಗಿ ನೆರವೇರಿ ಜನವರಿ 18 ರಂದು ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ.
ಪೀಠ ಏರುವ ಮಠಾಧೀಶರು ಜೋಡುಕಟ್ಟೆಯಿಂದ ಪುರಪ್ರವೇಶ ಮಾಡುವುದು ಸಂಪ್ರದಾಯ. ಶೀರೂರು ಮಠಾಧೀಶರು ಮಾತ್ರ ಕಡಿಯಾಳಿ ಮೂಲಕ ಪುರಪ್ರವೇಶ ಮಾಡುತ್ತಾರೆ. ಅದರಂತೆ ಕಡಿಯಾಳಿಯಿಂದ ಪುರಪ್ರವೇಶ ಮೆರವಣಿಗೆ ನಡೆದಿತ್ತು.



ಪ್ರತಿದಿನ ವಿವಿಧೆಡೆಯಿಂದ ಹೊರೆಕಾಣಿ ಬರುತ್ತಿದ್ದು, ನಗರದ ಜೋಡುಕಟ್ಟೆಯಿಂದ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಿರುವ ಉಗ್ರಾಣದವರೆಗೆ ಮೆರವಣಿಗೆ ನಡೆಯುತ್ತಿದೆ. ಇದೇ 17ರವರೆಗೂ ಪ್ರತಿದಿನ ವಿವಿಧ ಸಂಘ ಸಂಘ ಸಂಸ್ಥೆಗಳು, ಸಂಘಟನೆಗಳು ಹೊರೆಕಾಣಿಕೆ ಸಮರ್ಪಣೆ ಮಾಡಲಿವೆ. ರಥಬೀದಿಯಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದ್ದು, ಪ್ರಸಿದ್ದ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ.
17ರಂದು ರಾತ್ರಿ 3 ಗಂಟೆಗೆ ನಗರದ ಜೋಡುಕಟ್ಟೆಯಿಂದ ಪರ್ಯಾಯದ ಮೆರವಣಿಗೆ ನಡೆಯಲಿದ್ದು, ಸಾವಿರಾರು ಮಂದಿ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆ ಸಾಗಿಬರುವ ರಸ್ತೆಗಳ ದುರಸ್ತಿ ಕಾರ್ಯ ನಡೆದಿದೆ.
16ನೇ ಶತಮಾನದಲ್ಲಿ ಸೋದೆ ಮಠದ ವಾದಿರಾಜ ಸ್ವಾಮೀಜಿ ದೈವಾರ್ಷಿಕ ಪೂಜಾ ವ್ಯವಸ್ಥೆ ಆರಂಭಿಸಿದ್ದರು. ಇಂದಿಗೂ ಸಂಪ್ರದಾಯದಂತೆ ಪ್ರತಿ 2 ವರ್ಷಗಳಿಗೊಮ್ಮೆ ಪರ್ಯಾಯ ನಡೆಯುತ್ತಿದೆ.
ಉಡುಪಿ ನಗರವನ್ನು ಪ್ರವೇಶಿಸುವ ವಿವಿಧೆಡೆ ಬೃಹತ್ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಮರ, ಮತ್ತು ಬಟ್ಟೆಯನ್ನು ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕಮಾನುಗಳನ್ನು ನಿರ್ಮಿಸಲಾಗಿದೆ.
ಗೋಡೆಯಲ್ಲರಳಿದ ಕಾವಿಕಲೆ: ಪರ್ಯಾಯ ಸಂಭ್ರಮದಲ್ಲಿರುವ ಶೀರೂರು ಮಠ ಅತಿಥಿಗೃಹಗಳು ಸೇರಿದಂತೆ ವಿವಿಧ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿದಿದ್ದು ಆಕರ್ಷಕವಾಗಿ ಮಿಂಚುತ್ತಿವೆ. ಶೀರೂರು ಮಠದ ಒಳಗೆ ಹಾಗೂ ಮಠವನ್ನು ಪ್ರವೇಶಿಸುವಲ್ಲಿನ ಗೋಡೆಗಳಲ್ಲಿ ಕವಿ ಕಾಲೆಯಲ್ಲಿ ಚಿತ್ತಾರ ಮೂಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಶೀರೂರು ಮಠದ ಪ್ರವೇಶ ದ್ವಾರದಲ್ಲಿ ಜಯ ವಿಜಯರ ಚಿತ್ರಗಳನ್ನು ಮೂಡಿಸಲಾಗಿದೆ.



‘ಶೀರೂರು ಪರ್ಯಾಯಕ್ಕೆ ನಗರಸಭೆಯ ವತಿಯಿಂದ ₹50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಕಿನ್ನಿಮುಲ್ಕಿಯಿಂದ ಮಠದವರೆಗೆ ಪರ್ಯಾಯದ ಮೆರವಣಿಗೆ ಸಾಗುವ ದಾರಿಯಲ್ಲಿ ಹಾಗೂ ಕರಾವಳಿ ಬೈಪಾಸ್ ನಿಂದ ಕಲ್ಸಂಕದವರೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು. ‘ನಗರದ ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರು ಹೆಚ್ಚು ಸೇರುವ ಸ್ಥಳಗಳಲ್ಲಿ ಕಸದ ತೊಟ್ಟಿ ಇರಿಸಲಾಗುತ್ತದೆ. ಇಪ್ಪತ್ತು ಮೊಬೈಲ್ ಶೌಚಾಲಯಗಳನ್ನು ಮಠದ ಪಾರ್ಕಿಂಗ್ ಪ್ರದೇಶದ ಸಮೀಪ ವಿವಿಧೆಡೆ ಅಳವಡಿಸಲಾಗುವುದು. ಕಟ್ಟೆ ಆಚಾರ್ಯ ರಸ್ತೆ ಕನಕದಾಸ ರಸ್ತೆ ಸೇರಿದಂತೆ ಶ್ರೀಕೃಷ್ಣ ಮಠಕ್ಕೆ ತೆರಳುವ ರಸ್ತೆಗಳ ದುರಸ್ತಿ ಕಾರ್ಯ ಮಾಡಲಾಗಿದೆ. ಭಕ್ತರ ವಾಹನ ಪಾರ್ಕಿಂಗ್ ಗಾಗಿ ಖಾಸಗಿ ಸ್ಥಳಗಳನ್ನೂ ಗುರುತಿಸಿ ಸ್ವಚ್ಛಗೊಳಿಸಲಾಗಿದೆ’ ಎಂದು ಅವರು ವಿವರಿಸಿದರು.




ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿರುವ ಕೃಷ್ಣಮಠದ ರಾಜಾಂಗಣವು ಹೊಸ ರೂಪದಲ್ಲಿ ಕಂಗೊಳಿಸಲಿದೆ. ಪುತ್ತಿಗೆ ಮಠದ ಪರ್ಯಾಯದ ವೇಳೆ ರಾಜಾಂಗಣವನ್ನು ದಶಾವತಾರದ ಕಲ್ಪನೆಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ಇದೀಗ ಶೀರೂರು ಪರ್ಯಾಯಕ್ಕಾಗಿ ರಾಜಾಂಗಣವನ್ನು ಹಂಪಿಯ ಶಿಲ್ಪಕಲಾ ವೈಭವ ಸಾರುವ ವಿನ್ಯಾಸದಲ್ಲಿ ಸಿದ್ದಗೊಳಿಸಲಾಗುತ್ತಿದೆ. ಹಂಪಿ ಮಾದರಿಯ ಕಂಬಗಳು ಉಬ್ಬಶಿಲ್ಪಗಳು ವೇದಿಕೆಯಲ್ಲಿ ಕಂಗೊಳಿಸಲಿವೆ ಎಂದು ಮಠದ ಮೂಲಗಳು ತಿಳಿಸಿವೆ.
ಪರ್ಯಾಯವು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪ್ರತಿ ಎರಡು ವರ್ಷಕೊಮ್ಮೆ ನಡೆಯುವ ಧಾರ್ಮಿಕ ಆಚರಣೆಯಾಗಿದೆ. ಕೃಷ್ಣ ಮಠದ ಪೂಜೆ ಮತ್ತು ಆಡಳಿತವನ್ನು ದ್ವೈತ ತತ್ವಜ್ಞಾನಿ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟಮಠದ ಸ್ವಾಮೀಜಿಯವರು ಮಾಡುತ್ತಾರೆ. ಪ್ರತಿ ಮಠದ ಸ್ವಾಮೀಜಿಗೂ ಎರಡು ವರ್ಷಗಳ ಕಾಲ ಸರದಿಯಂತೆ ಉಡುಪಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವ ಅವಕಾಶ ಸಿಗುತ್ತದೆ.
ಮೂಲತಃ, ಪರ್ಯಾಯವು ಅಷ್ಟ (ಎಂಟು) ಮಠಗಳ ನಡುವೆ ಉಡುಪಿ ಶ್ರೀ ಕೃಷ್ಣ ಮಠದ ಆಡಳಿತದ ವಿಧ್ಯುಕ್ತ ವರ್ಗಾವಣೆಯನ್ನು ಗುರುತಿಸುತ್ತದೆ. ಆದರೆ ಪಟ್ಟಣ ಮತ್ತು ಅದರ ಜನರಿಗೆ, ಇದು ಧಾರ್ಮಿಕ ಬದಲಾವಣೆಗಿಂತ ಹೆಚ್ಚಿನದಾಗಿದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ಕಲಾ ಪ್ರಕಾರಗಳು, ಮೆರವಣಿಗೆಗಳು, ಆಚರಣೆಗಳು ಮತ್ತು ಸಮುದಾಯ ಚಟುವಟಿಕೆಗಳು ಕರಾವಳಿ ಕರ್ನಾಟಕದ ಅತ್ಯಂತ ಭವ್ಯ ಮತ್ತು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.


ಈ ವರ್ಷದ ಪರ್ಯಾಯ ಶ್ರೀ ಶಿರೂರು ಮಠದದ್ದಾಗಿದೆ. ಕೇವಲ 20 ವರ್ಷ ವಯಸ್ಸಿನ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರು ಮೊದಲ ಬಾರಿಗೆ ಸರ್ವಜ್ಞ ಪೀಠ (ಪರ್ಯಾಯ ಸಿಂಹಾಸನ) ವನ್ನು ಆರೋಹಣ ಮಾಡುತ್ತಿರುವುದು ಇದರ ವಿಶಿಷ್ಟತೆಗೆ ಕಾರಣವಾಗಿದೆ. ಉಡುಪಿ ಅಷ್ಟ ಮಠಗಳ ಪ್ರಸ್ತುತ ಪೀಠಾಧಿಪತಿಗಳಲ್ಲಿ ಕಿರಿಯರಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಜನವರಿ 18 ರಂದು ಎರಡು ವರ್ಷಗಳ ಅವಧಿಗೆ ಶ್ರೀ ಕೃಷ್ಣ ಮಠದ ಔಪಚಾರಿಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರಿಸುವುದರ ಜೊತೆಗೆ, ಯುವ ಪೀಠಾಧಿಪತಿಗಳು ತಮ್ಮ ಪರ್ಯಾಯದ ಸಮಯದಲ್ಲಿ ವೇದಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರವು ಕೇಸರಿಮಯವಾಗಿ ಕಂಗೊಳಿಸುತ್ತಿದೆ. ಮಣಿಪಾಲ, ಕುಂಜಿಬೆಟ್ಟು, ಶಾರದಾ ಕಲ್ಯಾಣ ಮಂಟಪ, ಬಿಗ್ ಬಜಾರ್, ಕಿನ್ನಿಮುಲ್ಕಿ, ಜೋಡುಕಟ್ಟೆ, ತ್ರಿವೇಣಿ ಸರ್ಕಲ್ಗಳಲ್ಲಿ ಡಿವೈಡರ್, ವೃತ್ತಗಳಲ್ಲಿ ಕೇಸರಿ, ತೋರಣ, ಚಪ್ಪರ, ಭಗವಾಧ್ವಜಗಳು ರಾರಾಜಿಸಿತ್ತಿವೆ. ಜನವರಿ 18 ರಂದು ಬೆಳಗಿನ ಜಾವ ಪರ್ಯಾಯದ ಮೆರವಣಿಗೆ ನಡೆಯಲಿದೆ.
ಕಾರ್ಯಕ್ರಮಗಳ ಸವಿವರ (ಜನವರಿ 18)
ಪ್ರಾತಃ 1.15: ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ
ಪ್ರಾತಃ 2.00: ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಆರಂಭ
ಬೆಳಿಗ್ಗೆ 5.15: ಕನಕನ ಕಿಂಡಿ ಮೂಲಕ ಶ್ರೀಕೃಷ್ಣ, ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದರ್ಶನ
ಬೆಳಿಗ್ಗೆ 5.45: ಶ್ರೀ ಸರ್ವಜ್ಞಪೀಠಾರೋಹಣ
ಬೆಳಿಗ್ಗೆ 5.55: ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ಸಾಂಪ್ರದಾಯಿಕ ದರ್ಬಾರ್
ಬೆಳಿಗ್ಗೆ 6.15: ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್, ಅನುಗ್ರಹ ಸಂದೇಶ
ಬೆಳಿಗ್ಗೆ 10.30: ಶ್ರೀಕೃಷ್ಣ ದೇವರ ಮಹಾಪೂಜೆ ಹಾಗೂ ಪಲ್ಲಪೂಜೆ
ಅನ್ನ ಸಂತರ್ಪಣೆ ವ್ಯವಸ್ಥೆ
ಜನವರಿ 17ರ ರಾತ್ರಿ 7.30ರಿಂದ ಸುಮಾರು 40 ಸಾವಿರ ಮಂದಿಗೆ ವಿಶೇಷ ಅನ್ನ ಸಂತರ್ಪಣೆ ನಡೆಯಲಿದೆ. ಸ್ಥಳ: ಶ್ರೀ ನಿತ್ಯಾನಂದ ಸ್ವಾಮಿ ಮಂದಿರ–ನಗರಸಭಾ ಕಚೇರಿ ಬಳಿ ಹಾಗೂ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ.
ಜನವರಿ 18ರಂದು ಪೂರ್ವಾಹ್ನ 11.30ರಿಂದ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ 50 ಸಾವಿರ ಮಂದಿಗೆ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ವೈಭವದ ಪರ್ಯಾಯ ಮೆರವಣಿಗೆ
ಜನವರಿ 18ರ ಮುಂಜಾನೆ 2 ಗಂಟೆಯಿಂದ ಉಡುಪಿ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ 85ಕ್ಕೂ ಅಧಿಕ ವಿವಿಧ ರಾಜ್ಯಗಳ ಕಲಾ ತಂಡಗಳು ಹಾಗೂ ಆಕರ್ಷಕ ಸ್ತಬ್ಧಚಿತ್ರಗಳೊಂದಿಗೆ ವೈಭವದ ಪರ್ಯಾಯ ಮೆರವಣಿಗೆ ಸಾಗಲಿದೆ.
ದರ್ಬಾರ್ ಸಭೆ – ಗಣ್ಯರ ಉಪಸ್ಥಿತಿ
ಜನವರಿ 18ರ ಬೆಳಿಗ್ಗೆ 6 ಗಂಟೆಗೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಸಭೆ ನಡೆಯಲಿದ್ದು, ಅಷ್ಟ ಮಠಾಧೀಶರು, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು, ಉದ್ಯಮಿಗಳು, ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು
ಜನವರಿ 18ರಿಂದ 27ರವರೆಗೆ ಪ್ರತಿದಿನ ಸಂಜೆ ರಾಜಾಂಗಣದಲ್ಲಿ ಧಾರ್ಮಿಕ ಪ್ರವಚನಗಳೊಂದಿಗೆ ರಾಷ್ಟ್ರಮಟ್ಟದ ಖ್ಯಾತ ಕಲಾವಿದರಿಂದ ನಾದಸ್ವರ, ಸಂಗೀತ, ಭಕ್ತಿ ಸಂಗೀತ, ನೃತ್ಯ, ಯಕ್ಷಗಾನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪರ್ಯಾಯ ವ್ಯವಸ್ಥೆಯನ್ನು ತತ್ವವಾದದ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶ್ರೀಮದ್ ಆನಂದ ತೀರ್ಥ ಭಗವದ್ಪಾದಾಚಾರ್ಯರು ಸ್ಥಾಪಿಸಿದರು, ಇದನ್ನು ದ್ವೈತ ದ್ವೈತ ತತ್ವಶಾಸ್ತ್ರ ಎಂದು ವ್ಯಾಪಕವಾಗಿ ಕರೆಯಲಾಗುತ್ತದೆ. ಶ್ರೀ ಮಧ್ವಾಚಾರ್ಯರು ಉಡುಪಿ ಶ್ರೀ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಮತ್ತು ಪೂಜೆಯ ಜವಾಬ್ದಾರಿಯನ್ನು ತಮ್ಮ ಎಂಟು ಶಿಷ್ಯರಿಗೆ ವಹಿಸಿದರು. ಅವರು ಪರ್ಯಾಯದ ಪರಿಕಲ್ಪನೆಯನ್ನು ಪರಿಚಯಿಸಿದರು. ಇನ್ನೂ ಶ್ರೀ ಕೃಷ್ಣನಿಗೆ ಪ್ರತಿದಿನ 16 ವಿಧದ ಪೂಜೆಗಳನ್ನು ಅರ್ಪಿಸಲಾಗುತ್ತದೆ. ಪರ್ಯಾಯ ಅವಧಿಯಲ್ಲಿ, ಶ್ರೀ ಕೃಷ್ಣನಿಗೆ ದೈನಂದಿನ ಪೂಜೆ ಸಲ್ಲಿಸಲು ಒಬ್ಬ ಋಷಿಗೆ ಅವಕಾಶವಿತ್ತು ಮತ್ತು ಪರ್ಯಾಯ ಅವಧಿಯ ನಂತರ ಅವರು ಧರ್ಮ ಪ್ರಚಾರವನ್ನು ಕೈಗೊಳ್ಳಬೇಕಾಗಿತ್ತು. ಆರಂಭದಲ್ಲಿ, ಪ್ರತಿಯೊಬ್ಬ ಋಷಿಗೆ ಎರಡು ತಿಂಗಳ ಅವಧಿಯನ್ನು ನೀಡಲಾಗಿತ್ತು. ಈ ವ್ಯವಸ್ಥೆಯು ಶತಮಾನಗಳವರೆಗೆ ಮುಂದುವರೆಯಿತು. ಅಲ್ಪಾವಧಿಯು ಶ್ರೀಗಳಿಗೆ ಕೃಷ್ಣ ಮಠದಲ್ಲಿ ಅರ್ಥಪೂರ್ಣ ಕೆಲಸವನ್ನು ಕೈಗೊಳ್ಳಲು ಅಥವಾ ಧರ್ಮ ಪ್ರಚಾರಕ್ಕಾಗಿ ಪ್ರಯಾಣಿಸಲು ಕಷ್ಟಕರವಾಗಿಸಿತು. ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿ ಎರಡು ವರ್ಷಗಳ ಪರ್ಯಾಯ ವ್ಯವಸ್ಥೆಯನ್ನು ಪರಿಚಯಿಸಿದರು, ಇದರಿಂದಾಗಿ ಮಠಾಧೀಶರಿಗೆ ಪೂಜೆ ನಡೆಸಲು, ಮಠವನ್ನು ನಿರ್ವಹಿಸಲು ಮತ್ತು ದ್ವೈತ ತತ್ವಶಾಸ್ತ್ರವನ್ನು ಹರಡಲು ಭಾರತದಾದ್ಯಂತ ಪ್ರಯಾಣಿಸಲು ಸಾಕಷ್ಟು ಸಮಯ ದೊರೆಯಿತು. ಅಂದಿನಿಂದ, ಪರ್ಯಾಯವನ್ನು ಮಕರ ಸಂಕ್ರಮಣದ ನಾಲ್ಕನೇ ದಿನ – ಜನವರಿ 18 ರಂದು ನಡೆಸಲಾಗುತ್ತಿದೆ. ಪರ್ಯಾಯ ಪೀಠವನ್ನು ಏರುವ ಮಠಾಧೀಶರು ಎರಡು ವರ್ಷಗಳ ಕಾಲ ಉಡುಪಿ ಕೃಷ್ಣ ಮಠದಲ್ಲಿ ಇರಬೇಕು.




