ಕಾರ್ಕಳ : ಆಸ್ತಿ ವಿಚಾರದಲ್ಲಿ ತಮ್ಮನೇ ತನ್ನ ಅಣ್ಣನ ಕೊಲೆ ಮಾಡಿರುವ ಘಟನೆ ಕಾರ್ಕಳ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಕೊಲೆಗೀಡಾದವರನ್ನು ಸ್ಥಳೀಯ ನಿವಾಸಿ ರಿಚಾರ್ಡ್ ಡಿಸೋಜ(65) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಮೃತರ ತಮ್ಮ ಹೆರಾಲ್ಡ್ ಡಿಸೋಜ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಿಚರ್ಡ್ ಡಿಸೋಜ ಮತ್ತು ಹೆರಾಲ್ಡ್ ಡಿಸೋಜ ಕಾರ್ಕಳ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ವಾಸವಾಗಿದ್ದು, ಈ ಮನೆ ಹಾಗೂ ಜಾಗದ ಬಗ್ಗೆ ಇವರಿಬ್ಬರ ಮಧ್ಯೆ ತಕರಾರು ಇತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಮೇ 2 ರಂದು ಸಂಜೆ 6 ಗಂಟೆ ಸುಮಾರಿಗೆ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿನ ಜಾಗದಲ್ಲಿ ಹೆರಾಲ್ಡ್ ಡಿಸೋಜ ಮತ್ತು ರಿಚಾರ್ಡ್ ಡಿಸೋಜ ಮಧ್ಯೆ ಗಲಾಟೆ ನಡೆದಿತ್ತು. ಆ ವೇಳೆ ಹೆರಾಲ್ಡ್ ಡಿಸೋಜ, ತನ್ನ ಅಣ್ಣ ರಿಚಾರ್ಡ್ ಡಿಸೋಜಗೆ ಮರದ ರೀಪಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ಮೃತರ ಪತ್ನಿ ಜೆಸಿಂತ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿ ಹೆರಾಲ್ಡ್ ಡಿಸೋಜನನ್ನು ಪೊಲೀಸ್ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕಾರ್ಯಾಚರಣೆಯನ್ನು ಕಾರ್ಕಳ ಡಿವೈಎಸ್ ಪಿ.ವಿಜಯಪ್ರಸಾದ್ ಮಾರ್ಗದರ್ಶನದಂತೆ ಕಾರ್ಕಳ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಅಜ್ಮತ್ ಅಲಿ, ಕಾರ್ಕಳ ಗ್ರಾಮಾಂತರ ಎಸ್ಸೈಗಳಾದ ಪ್ರಸನ್ನ ಎಂ.ಎಸ್. ಮುರುಳೀಧರ್ ನಾಯ್ಕ್ ಹಾಗೂ ಕಾರ್ಕಳ ನಗರ ಎಸ್ಸೈ ಶಿವಕುಮಾರ್, ಸಿಬ್ಬಂದಿ ಶೇಖರ್ ನಾಯ್ಕ, ಮೂರ್ತಿ, ರಂಜಿತ್, ಶ್ರೀನಿವಾಸ್, ಮಹಾಂತೇಶ್, ಗೋಪಾಲಕೃಷ್ಣ, ಗಜಾನಾಯ್ಕ್, ಶಶಿ, ಸಂತೋಷ ನಡೆಸಿದ್ದಾರೆ.




