ಯುಡಿ ನ್ಯೂಸ್ ಡಾಟ್ ಕಾಮ್
ಕುಂದಾಪುರ: ಸ್ಥಳೀಯ ಕ್ರೀಡಾಳುಗಳ ಬಹು ಬೇಡಿಕೆಯ ವಾಲಿಬಾಲ್ ಹಾಗೂ ಕಬ್ಬಡಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರು ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಶಾಸಕ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಈ ಮೈದಾನದಲ್ಲಿ ನಿತ್ಯ ಕ್ರೀಡಾಭ್ಯಾಸ ಮಾಡುತ್ತಿರುವ ವಾಲಿಬಾಲ್ ಹಾಗೂ ಕಬ್ಬಡಿ ಆಟಗಾರರ ಹಾಗೂ ಕ್ರೀಡಾ ಸಂಘಟನೆಗಳ ಪ್ರಮುಖರು ಒತ್ತಾಯದಂತೆ ಆಟಗಾರಿಗೆ ಅನುಕೂಲವಾಗುವಂತೆ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಇಂದು ಗುದ್ದಲಿ ಮುಹೂರ್ತ ಹಾಗೂ ಭೂಮಿ ಪೂಜೆ ನೆರವೇರಿಸಲಾಗಿದೆ. ಸರ್ವ ಋತುಗಳಲ್ಲಿಯೂ ಕ್ರೀಡಾಭ್ಯಾಸ ಹಾಗೂ ತರಬೇತಿ ಪಡೆದುಕೊಳ್ಳಲು ಸಹಾಯವಾಗುವಂತೆ ಎರಡು ಕ್ರೀಡಾಂಗಣಗಳನ್ನು ಮೇಲ್ಛಾವಣಿ ಮಾಡಿ ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದರು.
ವಾಲಿಬಾಲ್ ಒಳಕ್ರೀಡಾಂಗಣಕ್ಕೆ ಕ್ರೀಡಾಂಗಣದ ಸ್ವಂತ ನಿಧಿ ಹಾಗೂ ಕಬ್ಬಡಿ ಒಳಕ್ರೀಡಾಂಗಣವನ್ನು ಶಾಸಕರ ನಿಧಿಯಿಂದ ನಿರ್ವಹಿಸಲಾಗುವುದು. ಪ್ರತಿ ಕ್ರೀಡಾಂಗಣಕ್ಕೂ ಅಂದಾಜು ₹12-13 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಕಬ್ಬಡಿ ಅಂಕಣಕ್ಕೆ ನೆಲ ಹಾಸು ಹಾಕಿ, ರಬ್ಬರ್ ಮ್ಯಾಟ್ ಆಟಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ. ಕ್ರೀಡಾ ಚಟುವಟಿಕೆಗಳ ಜೊತೆಗೆ ಇತರ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಕಾಮಗಾರಿ ವಿನ್ಯಾಸ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಕಬ್ಬಡಿ ಅಮೆಚೂರ್ ಅಸೋಸಿಯೇಷನ್ ಉಪಾಧ್ಯಕ್ಷ ರಾಜೇಶ್ ಕೆ.ಸಿ, ಮಂಗಳೂರು ವಿ.ವಿ ವಾಲಿಬಾಲ್ ತಂಡದ ಮಾಜಿ ನಾಯಕ ರಾಜೇಶ್ ಕಾವೇರಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸತ್ಯನಾರಾಯಣ ಜಿ ಬಾಡ, ತಾಲ್ಲೂಕು ಕಬ್ಬಡಿ ಅಮೆಚೂರ್ ಅಸೋಸಿಯೇಷನ್ ಅಧ್ಯಕ್ಷ ಸುನೀಲ್ ಶೆಟ್ಟಿ ಹೇರಿಕುದ್ರು, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಮಾಜಿ ಅಧ್ಯಕ್ಷ ಸುಧೀರ್ ಕೆ.ಎಸ್, ಚಕ್ರವರ್ತಿ ಕ್ರಿಕೆಟರ್ಸ್ನ ಸಾಂಸ್ಕೃತಿಕ ಕಾರ್ಯದರ್ಶಿ ರಾಘವೇಂದ್ರ ಚರಣ್ ನಾವಡ, ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ಖಾರ್ವಿ, ರಾಷ್ಟ್ರೀಯ ಆಟಗಾರ ಮಹಮ್ಮದ್ ಸಮೀರ್, ನಿರ್ಮಿತಿ ಇಂಜಿನಿಯರ್ ಗಣೇಶ್ ಶೆಟ್ಟಿ ಇದ್ದರು.




