Saturday, June 27, 2026

ಮಲ್ಪೆಯಲ್ಲಿ ಎಂ.ಡಿ.ಎಂ.ಎ ಮಾರಾಟ: ಯುವಕ ಬಂಧನ; ರೂ.1.52 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ (MDMA) ಮಾರಾಟ ಮಾಡುತ್ತಿದ್ದ ಆರೋಪದಡಿ 19 ವರ್ಷದ ಯುವಕನನ್ನು ಮಲ್ಪೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ರೂ.1.52 ಲಕ್ಷ ಮೌಲ್ಯದ ಮಾದಕ ವಸ್ತು, ಸ್ಕೂಟರ್ ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಸೈಯ್ಯದ್ ಮೊಹಮ್ಮದ್ ಮೆಹರಾಜ್ (19), ಸೈಯ್ಯದ್ ಮನ್ಸೂರ್ ಅವರ ಪುತ್ರ, ಬ್ರಹ್ಮಾವರದ ಸ್ವರ್ಣ ರೆಸಿಡೆನ್ಸಿ, ಆಕಾಶವಾಣಿ ಸಮೀಪ ನಿವಾಸಿ ಹಾಗೂ ಮೂಲತಃ ಶಿರೂರಿನ ಜೆ.ಎಂ. ಕ್ರಾಸ್ ರಸ್ತೆ, ಮುಸ್ಲಿಂ ಮೊಹಲ್ಲಾ ನಿವಾಸಿ ಎಂದು ಗುರುತಿಸಲಾಗಿದೆ.

ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಮಲ್ಪೆಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಎಂ.ಡಿ.ಎಂ.ಎ ಮಾದಕ ವಸ್ತು ಹೊಂದಿದ್ದು, ಕಾಪು, ಬ್ರಹ್ಮಾವರ, ಉಡುಪಿ ಹಾಗೂ ಮಣಿಪಾಲ ಭಾಗಗಳ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಬಂಧಿಸಲಾಯಿತು.

ಆರೋಪಿಯಿಂದ 1 ಗ್ರಾಂ 03 ಮಿಲಿಗ್ರಾಂ ಎಂ.ಡಿ.ಎಂ.ಎ, ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ ಒಂದು ಸ್ಕೂಟರ್ ಸೇರಿದಂತೆ ಒಟ್ಟು ರೂ.1,52,000 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 68/2026ರಡಿ ಎನ್‌ಡಿಪಿಎಸ್ ಕಾಯ್ದೆ-1985ರ ಕಲಂ 8(c) ಹಾಗೂ 22(b) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

More like this
Related

ದಾಖಲೆ ಇಲ್ಲದೆ ಸರಕು ಸಾಗಣೆ ವಾಹನ ಗಡಿದಾಟಬಾರದು : ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

ಬೆಂಗಳೂರು: ಯಾವುದೇ ಸರಕು ಸಾಗಣೆ ವಾಹನವು ಅಗತ್ಯ ದಾಖಲೆಗಳಿಲ್ಲದೆ ಚೆಕ್‍ಪೋಸ್ಟ್ ಅಥವಾ...

ಕೋತಿಗಳಿಗೆ ಹಣ್ಣು ನೀಡಲು ಹೋಗಿ ಅನಾಹುತ! ಬೆಟ್ಟದಿಂದ ಜಾರಿ ಬಿದ್ದು ನವವಿವಾಹಿತೆ ಸಾವು

ತೂತುಕ್ಕುಡಿ: ತಮಿಳುನಾಡಿನ ಪ್ರಸಿದ್ಧ ಬೆಟ್ಟದ ದೇವಾಲಯವೊಂದರಲ್ಲಿ ಮಂಗಗಳ ಹಿಂಡಿನಿಂದ ಬೆಚ್ಚಿಬಿದ್ದ ನವವಿವಾಹಿತೆಯೊಬ್ಬರು...

ರಾಮ ಮಂದಿರ ದೇಣಿಗೆ ಹಗರಣ: ಆರೋಪಿಗಳ ಬಂಧನ ಬೆನ್ನಲ್ಲೇ 79.85 ಲಕ್ಷ ರೂ. ವಶಕ್ಕೆ

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಂಧಿಸಲಾದ...

ಪರ್ಕಳ: ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ- ತಪ್ಪಿದ ಭಾರೀ ಅನಾಹುತ

ಉಡುಪಿ: ಪರ್ಕಳದ ಕೆಳಪರ್ಕಕಳ ಹೆದ್ದಾರಿಯಲ್ಲಿ (NH169A) ಕೆನರಾ ಬ್ಯಾಂಕಿನ ತಿರುವಿನಲ್ಲಿ ಕಂಟೇನರ್...

Copying is disabled on Udupi Digital News.