ಉಡುಪಿ: ಶ್ರೀಕೃಷ್ಣಾಷ್ಟಮಿ ಅಂಗವಾಗಿ ಉಡುಪಿಯ ಮಲ್ಪೆ ಲಕ್ಷ್ಮೀನಗರದ ಶ್ರೀ ಸಿದ್ಧಿ ಇವೆಂಟ್ಸ್ ವತಿಯಿಂದ ಈ ಬಾರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿವ್ಯ ಸತೀಶ್ ಹಾಗೂ ಅವರ ಎಂಟು ವರ್ಷದ ಪುತ್ರಿ ಸಿದ್ದಿ ಎಸ್. ಕಾಮತ್ ಅವರು ಕೃಷ್ಣಾಸುರ ವೇಷ ಧರಿಸಿ ಜನರ ಗಮನ ಸೆಳೆಯಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಂಗ್ರಹವಾಗುವ ನೆರವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲು ಸಂಕಲ್ಪಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿವ್ಯ ಸತೀಶ್, ತಮ್ಮ ಪುತ್ರಿ ಸಿದ್ದಿ ಎಸ್. ಕಾಮತ್ ಪ್ರತಿವರ್ಷ ಶ್ರೀಕೃಷ್ಣಾಷ್ಟಮಿ ಸಂದರ್ಭದಲ್ಲಿ ಶ್ರೀಕೃಷ್ಣ ವೇಷ ಧರಿಸುತ್ತಿದ್ದಾಳೆ. ಈ ಬಾರಿ ಮಗಳೊಂದಿಗೆ ತಾನೂ ಕೃಷ್ಣಾಸುರ ವೇಷ ಧರಿಸಿ ಜನರ ಮುಂದೆ ಕಾಣಿಸಿಕೊಳ್ಳಲಿದ್ದು, ಸಾರ್ವಜನಿಕರಿಂದ ದೊರೆಯುವ ಸಹಕಾರವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಸೆಪ್ಟೆಂಬರ್ 4 ಮತ್ತು 5ರಂದು ಉಡುಪಿಯ ಮಲ್ಪೆ ತೊಟ್ಟಂ, ಪಿತ್ರೋಡಿ ಭಾಗದಲ್ಲಿ ತಾಯಿ-ಮಗಳು ಕೃಷ್ಣಾಸುರ ವೇಷದಲ್ಲಿ ಸಂಚರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ನೀಡುವ ನೆರವನ್ನು ಅಗತ್ಯವಿರುವ ಬಡ ಮಕ್ಕಳ ಶಿಕ್ಷಣಕ್ಕೆ ಬಳಸಲಾಗುವುದು ಎಂದು ದಿವ್ಯ ಸತೀಶ್ ಹೇಳಿದರು.
ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಸಾಧ್ಯವಾದಷ್ಟು ನೆರವು ನೀಡುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ಸಾರ್ವಜನಿಕರು ಈ ಸತ್ಕಾರ್ಯಕ್ಕೆ ಕೈಜೋಡಿಸಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಪೆ ಸಿದ್ಧಿ ಐ ಕೇರ್ ಮಾಲೀಕ ಸತೀಶ್ ಕಾಮತ್, ಸಿದ್ದಿ ಎಸ್. ಕಾಮತ್, ರಕ್ಷಿತ್ (ಮುನ್ನ), ನಿತೇಶ್ ಹಾಗೂ ಡಾ. ದೀಪ ಉಪಸ್ಥಿತರಿದ್ದರು.




