ಕುಂದಾಪುರ: ಸಿದ್ಧಾಪುರ ಏತ ನೀರಾವರಿ ಯೋಜನೆಯ ಮೂಲ ಯೋಜನೆ ಕೈಬಿಟ್ಟು ಕೆಳಭಾಗದಲ್ಲಿ ಮಾಡಬೇಕು ಎನ್ನುವ ಒತ್ತಡಗಳು ಕೇಳಿ ಬರುತ್ತಿದ್ದು, ಯಾವುದೇ ಕಾರಣಕ್ಕೂ ಸರಕಾರ, ಇಲಾಖೆಗಳು ಒತ್ತಡಕ್ಕೆ ಒಳಗಾಗದರೆ ಮೂಲ ಡಿಪಿಆರ್ ಇದ್ದಂತೆ ಯೋಜನೆಯನ್ನು ಅನುಷ್ಟಾನಗೊಳಿಸಬೇಕು. ಇಲ್ಲವಾದಲ್ಲಿ ಸಿದ್ಧಾಪುರ ಭಾಗದ ರೈತರನ್ನು ಒಳಗೊಂಡು ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದು ರೈತ ಮುಖಂಡ, ಜಿ.ಪಂ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಅವರು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸತತ ಹೋರಾಟಗಳ ಬಳಿಕ ಆರಂಭವಾಗಿರುವ ಸಿದ್ಧಾಪುರ ಏತ ನೀರಾವರಿ ಯೋಜನೆಗೆ ಈಗ ತಡೆಗಳು ಬರುತ್ತಿದೆ. 2018ರಲ್ಲಿ ಸೌಕೂರು ಸಿದ್ದಾಪುರ ಏತನೀರಾವರಿ ಯೋಜನೆಗೆ 50 ಕೋಟಿ ರೂಪಾಯಿ ಮಂಜೂರಾತಿ ಆಗಿದ್ದು, ಅದರಲ್ಲಿ ಕಾಣದ ಕೈಗಳ ಕಾರಣದಿಂದ ಸಿದ್ಧಾಪುರ ಬಿಟ್ಟು ಹೋಗಿತ್ತು. ಬಳಿಕ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಬಿ.ವೈ ರಾಘವೇಂದ್ರ ಸಂಸದರಾಗಿದ್ದಾಗ ನಾವೆಲ್ಲಾ ಮನವಿ ಮಾಡಿದ ಹಿನ್ನೆಲೆಯಲ್ಲಿ 2019ರಲ್ಲಿ ಡಿಪಿಆರ್ ಆಗಿ 165 ಕೋಟಿ ರೂಪಾಯಿ ಮಂಜೂರಾತಿಯಾಯಿತು. 2022ರಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಿ 2023ರಲ್ಲಿ ನಿಗಮದಿಂದ ಒಪ್ಪಿಗೆ ಸಿಕ್ಕಿ, 2023ರಲ್ಲಿ ಶಿವಮೊಗ್ಗದ ಒಂದು ಕಂಪೆನಿಗೆ ಟೆಂಡರ್ ಆಗಿತ್ತು. ಆದರೆ ಅವರು ಕೆಲಸ ಮಾಡಲು ಮುಂದೆ ಬರಲಿಲ್ಲ. ಬಳಿಕ ರಾಜೇಶ ಕಾರಂತ ಅವರಿಗೆ ಮರು ಟೆಂಡರ್ ಆಗಿ ಕಳೆದ ಎರಡು ತಿಂಗಳ ಹಿಂದೆ ಸಿದ್ದಾಪುರದಿಂದ ಕಾಮಗಾರಿಯ ಪೈಪ್ ಲೈನ್ ಆರಂಭಿಸಿದ್ದರು. ಆಗ ನಾವು ಪಂಪ್ ಹೌಸ್ನಿಂದಲೇ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದೆವು. ಮೂಲ ಡಿಪಿಆರ್ನಲ್ಲಿರುವಂತೆ ಪಂಪ್ ಹೌಸ್ ಬಳಿ ಕಾಮಗಾರಿ ಆರಂಭಿಸಲು ತೆರಳಿದಾಗ ಅಲ್ಲಿನ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಾಗ ನಾವು ಅಧಿಕಾರಿಗಳನ್ನು ಸಂಪರ್ಕಿಸಿದ ವೇಳೆ ನಮಗೆ ಸರಕಾರದ ಪತ್ರವಿದೆ. ಇಲ್ಲಿ ಕಾಮಗಾರಿ ಮಾಡುವಂತಿಲ್ಲ ಎಂದರು. ನಾವು ನಿಗಮವನ್ನು ಸಂಪರ್ಕಿಸಿ ಮೂಲ ಯೋಜನೆಯಂತೆ ಕಾಮಗಾರಿ ನೆಡೆಸಲು ಮನವಿ ಕೊಟ್ಟೆವು. ಮೂಲಯೋಜನೆಯಂತೆ ಕಾಮಗಾರಿ ನಡೆಸಿದರೆ ಹೊಳೆಯಲ್ಲಿರುವ ಶಿವಲಿಂಗಕ್ಕೆ ಸಮಸ್ಯೆಯಾಗುತ್ತದೆ. ಜಲಚರಗಳಿಗೆ ತೊಂದರೆಯಾಗುತ್ತದೆ. ಕೆಳಭಾಗದಲ್ಲಿರುವ ರೈತರಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣವನ್ನಿಟ್ಟುಕೊಂಡು ಮೂಲಯೋಜನೆಯನ್ನು ತಡೆಯುವ ಕೆಲಸವಾಗುತ್ತಿದೆ ಎಂದರು.
ಮೂಲಯೋಜನೆಯಂತೆ ಮಾಡಿದರೆ ಉಳ್ಳೂರು, ಮಚ್ಚಟ್ಟು, ತೊಂಬಟ್ಟು ಗ್ರಾಮಗಳಿಗೆ ತೊಂದರೆಯಾಗುತ್ತದೆ ಎಂದು ಮನವಿ ಕೊಟ್ಟವರು ಯಾರು? ಹೊಳೆಯಲ್ಲಿರುವ ಶಿವಲಿಂಗಕ್ಕೆ ನೀರು ಹರಿಯುವುದಿಲ್ಲ ಎಂದವರು ಯಾರು? ವಾರಾಹಿ ಮೂಲ ಮಾಣಿ ಜಲಾಶಯವಾಗಿದ್ದು, ಅಲ್ಲಿ ಮೂರು ಗೇಟುಗಳನ್ನು ತೆರೆದರೆ 3075 ಕ್ಯೂಸೆಕ್ಸ್ ನೀರು ಬರುತ್ತದೆ. ವಾರಾಹಿಯಲ್ಲಿ ಸರ್ಕಾರ 2005ರಲ್ಲಿ ಡ್ಯಾಂ ನಿರ್ಮಿಸಿದ್ದು ಎಡದಂಡೆ, ಬಲದಂಡೆ, ಕುಡಿಯುವ ನೀರು, ಏತನೀರಾವರಿ ಹಾಗೂ ಮುಂದಿನ ಯೋಜನೆಗಳಿಗಾಗಿ ಇಲ್ಲಿ ಸರಕಾರ ಡ್ಯಾಂ ನಿರ್ಮಾಣ ಮಾಡಿದೆ. ಈಗ ಎಡದಂಡೆ ಯೋಜನೆಯಲ್ಲಿ ನೀರು ಹರಿಯುತ್ತಿದೆ. ಅದು ಪೂರ್ಣ ಪ್ರಮಾಣ ತಲುಪಿಲ್ಲ. ಏತ ನೀರಾವರಿಗೆ ದಿನಕ್ಕೆ 66 ಕ್ಯೂಸೆಕ್ಸ್ ನೀರು ತಗೆಯುವುದು ಅಷ್ಟೆ. ಅದರಿಂದ ಅಂತಹ ಸಮಸ್ಯೆಯಾಗುವುದಿಲ್ಲ. ಈಗ ಮಾಜಿ ಶಾಸಕರು ಪತ್ರಿಕಾಗೋಷ್ಟಿ ನಡೆಸಿ ಹೇಳಿಕೆ ನೀಡಿರುವುದು ಗೊಂದಲಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಬಗ್ಗೆ ಪರಿಶೀಲನೆ ಮಾಡುವಂತೆ ಪತ್ರ ನೀಡಿದ್ದಾರೆಯೇ ಹೊರತು ಅದು ಅದೇಶವಲ್ಲ ಎಂದರು.
ಇದು ಸಿದ್ದಾಪುರದ ಸಾರ್ವಜನಿಕರಿಗೆ ಸಂಬಂಧಪಟ್ಟ ವಿಚಾರ. ಡ್ಯಾಂನ ಕೆಳಭಾಗದಲ್ಲಿ ಮಾಡಿದರೆ ಚೆಕ್ ಡ್ಯಾಂಗಳನ್ನು ಮಾಡಬೇಕಾಗುತ್ತದೆ. ಅರಣ್ಯ ಇಲಾಖೆಯ ನಿರಾಪೇಕ್ಷಣೆ ಬೇಕಾಗುತ್ತದೆ. ಹೆಚ್ಚಿನ ಅನುದಾನ ಬೇಕಾಗುತ್ತದೆ. ಇದೆಲ್ಲಾ ಆಗುವಾಗ ಇನ್ನಷ್ಟು ಸಮಯ ತಗೆದುಕೊಳ್ಳುತ್ತದೆ. ಈಗಾಗಲೇ ವಿಳಂಬವಾಗಿದೆ. ಇನ್ನೂ ಕೂಡಾ ಅನಗತ್ಯ ಕಾರಣ ನೀಡಿ ಕಾಮಗಾರಿ ತಡೆಯುವುದು ಸರಿಯಲ್ಲ. ಈಗಾಗಲೇ ಸಿದ್ಧಾಪುರ ಏತ ನೀರಾವರಿ ವ್ಯಾಪ್ತಿಯ ಗ್ರಾಮ ಪಂಚಾಯತ್ಗಳು ವಿಶೇಷ ಗ್ರಾಮ ಸಭೆ ನಡೆಸಿ ನಿರ್ಣಯ ಮಾಡಲಾಗಿದೆ ಎಂದರು.
ಮೂಲ ಡಿಪಿಆರ್ ಇದ್ದಂತೆ ಯೋಜನೆ ಅನುಷ್ಟಾನವಾಗಬೇಕು, ಇಲ್ಲದಿದ್ದರೆ ರೈತ ಸಂಘಟನೆಗಳು, ಗ್ರಾಮಸ್ಥರು ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು. ಬೈಂದೂರು ಶಾಸಕರು ಕೂಡಾ ನಮ್ಮೊಂದಿಗೆ ಇರುವುದಾಗಿ, ಅವಶ್ಯಕತೆ ಇದ್ದರೆ ಧರಣಿಯಲ್ಲಿ ಕುಳಿತುಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಹಾಗಾಗಿ ಸರಕಾರ, ರೈತರು ಹಿತಾಸಕ್ತಿಯನ್ನು ಗಮನಿಸಬೇಕು ಎಂದರು.
ಈ ಸಂದರ್ಭದಲ್ಲಿ ಹರ್ಷ, ಭೋಜರಾಜ ಶೆಟ್ಟಿ, ಕೃಷ್ಣ ಪೂಜಾರಿ, ಶೇಖರ ಕುಲಾಲ್, ಪ್ರಕಾಶ ಶೆಟ್ಟಿ, ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.




