ಭುವನೇಶ್ವರ, : ಒಡಿಶಾದ ಕಿಯೋಂಜಾರ್ ಜಿಲ್ಲೆಯ ಗ್ರಾಮೀಣ ಬ್ಯಾಂಕ್ನಲ್ಲಿ ನಡೆದ ಅಮಾನವೀಯ ಘಟನೆ ಕುರಿತು ಬಿಜು ಜನತಾ ದಳ ಮುಖ್ಯಸ್ಥ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ನವೀನ್ ಪಟ್ನಾಯಕ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 27ರಂದು ಜೀತು ಮುಂಡಾ ಎಂಬ 50 ವರ್ಷದ ಆದಿವಾಸಿ ವ್ಯಕ್ತಿ, ಮೃತಪಟ್ಟ ತಮ್ಮ ಸಹೋದರಿಯ ಬ್ಯಾಂಕ್ ಠೇವಣಿ ಹಣ ಪಡೆಯಲು ಆಕೆಯ ಅಸ್ಥಿಪಂಜರವನ್ನು ಬ್ಯಾಂಕ್ ಮುಂದೆ ತಂದು ಇಟ್ಟ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು.
ಜೀತು ಮುಂಡಾ ಅವರ ಸಹೋದರಿ ಕಲ್ರಾ ಮುಂಡಾ ಜನವರಿಯಲ್ಲಿ ಮೃತಪಟ್ಟಿದ್ದರು. ಬ್ಯಾಂಕ್ ಖಾತೆಯಲ್ಲಿದ್ದ ₹20,000 ಹಣ ಪಡೆಯಲು ಅವರು ಹಲವಾರು ಬಾರಿ ಬ್ಯಾಂಕ್ಗೆ ತೆರಳಿದರೂ, “ವೈಯಕ್ತಿಕ ಹಾಜರಾತಿ” ಬೇಕೆಂದು ಬ್ಯಾಂಕ್ ಸಿಬ್ಬಂದಿ ಹೇಳಿದ ಆರೋಪ ಕೇಳಿಬಂದಿತ್ತು. ಇದರಿಂದ ಬೇಸತ್ತ ಅವರು ತಮ್ಮ ಸಹೋದರಿಯ ಅವಶೇಷಗಳನ್ನು ತೆಗೆದುಕೊಂಡು ಬ್ಯಾಂಕ್ಗೆ ಬಂದಿದ್ದರು. ಈ ಕುರಿತು ಪತ್ರದಲ್ಲಿ ಪ್ರತಿಕ್ರಿಯಿಸಿದ ನವೀನ್ ಪಟ್ನಾಯಕ್, “ನಿಯಮಗಳು ಜನರನ್ನು ಸಬಲಗೊಳಿಸಲು, ಸೇವೆ ನೀಡಲು ರೂಪಿಸಲ್ಪಟ್ಟಿವೆ. ಅವಮಾನಿಸಲು ಅಲ್ಲ,” ಎಂದು ತಿಳಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಹೆಸರಿನಲ್ಲಿ ತಮ್ಮ ನಡೆ ಸಮರ್ಥಿಸಿಕೊಳ್ಳಲು ಯತ್ನಿಸಿರುವುದು ಇನ್ನಷ್ಟು ಆತಂಕಕಾರಿ ಎಂದು ಅವರು ಹೇಳಿದ್ದಾರೆ. ಗ್ರಾಮೀಣ ಹಾಗೂ ಆದಿವಾಸಿ ಪ್ರದೇಶಗಳ ಬ್ಯಾಂಕ್ಗಳಲ್ಲಿ ಮಾನವೀಯತೆ, ಸಹಾನುಭೂತಿ ಮತ್ತು ಜನಕೇಂದ್ರಿತ ಸೇವೆ ಖಚಿತಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಹೊಣೆಗಾರರನ್ನು ತಕ್ಷಣ ಗುರುತಿಸಿ ಕ್ರಮ ಕೈಗೊಳ್ಳಬೇಕು. ಇದರಿಂದ ದೇಶದ ಎಲ್ಲಾ ಗ್ರಾಮೀಣ ಬ್ಯಾಂಕ್ಗಳಿಗೆ ಸ್ಪಷ್ಟ ಸಂದೇಶ ಹೋಗಲಿದೆ ಎಂದು ನವೀನ್ ಪಟ್ನಾಯಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.




