ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಭಾನುವಾರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ ಒಂಬತ್ತು ಸಚಿವರೂ ಪದಗ್ರಹಣ ಮಾಡಲಿದ್ದಾರೆ. ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.
ಆದರೆ ಹೊಸ ಸರ್ಕಾರವು ಅಧಿಕೃತವಾಗಿ ಕಾರ್ಯಾರಂಭ ಮಾಡುವ ಮೊದಲು ವಿಧಾನಸಭೆಯಲ್ಲಿ ಎರಡು ಪ್ರಮುಖ ಸಂವಿಧಾನಾತ್ಮಕ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಿದೆ. ಅವುಗಳೆಂದರೆ ಸಭಾಧ್ಯಕ್ಷರ ಆಯ್ಕೆ ಹಾಗೂ ವಿಶ್ವಾಸಮತ ಯಾಚನೆ.
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಮೇ 13ರೊಳಗೆ ವಿಜಯ್ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸಬೇಕೆಂದು ಸೂಚನೆ ನೀಡಿದ್ದಾರೆ.
ಈ ಪ್ರಕ್ರಿಯೆಯ ಭಾಗವಾಗಿ ಮೊದಲಿಗೆ ವಿಧಾನಸಭೆಯಲ್ಲಿ ಸಭಾಧ್ಯಕ್ಷ ಮತ್ತು ಉಪಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಆಡಳಿತಾರೂಢ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಸಭಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಸಾಧ್ಯತೆ ಇದ್ದು, ವಿರೋಧ ಪಕ್ಷವೂ ಸ್ಪರ್ಧಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಸ್ಪರ್ಧೆ ನಡೆದರೆ ವಿಧಾನಸಭೆಯಲ್ಲಿ ಮತದಾನ ನಡೆಯಲಿದ್ದು, ಹೆಚ್ಚಿನ ಮತ ಪಡೆದ ಅಭ್ಯರ್ಥಿಯನ್ನು ಸಭಾಧ್ಯಕ್ಷರಾಗಿ ಘೋಷಿಸಲಾಗುತ್ತದೆ.
ಒಮ್ಮತದ ಅಭ್ಯರ್ಥಿ ಆಯ್ಕೆಯಾದರೆ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಹೊಸ ಸಭಾಧ್ಯಕ್ಷರನ್ನು ಸಭಾಧ್ಯಕ್ಷರ ಕುರ್ಚಿವರೆಗೆ ಕರೆತರುವ ಸಂಪ್ರದಾಯ ಮುಂದುವರಿಯುವ ನಿರೀಕ್ಷೆಯಿದೆ.
ಸಭಾಧ್ಯಕ್ಷರ ಆಯ್ಕೆಯ ಬಳಿಕ ಸರ್ಕಾರ ವಿಶ್ವಾಸಮತ ನಿರ್ಣಯ ಮಂಡಿಸಲಿದೆ. ಇದು ಅದೇ ದಿನ ಅಥವಾ ಮೇ 13ರಂದು ನಡೆಯುವ ಸಾಧ್ಯತೆ ಇದೆ.
ಆಡಳಿತಾರೂಢ ಪಾಳಯದ ಸದಸ್ಯರು ವಿಶ್ವಾಸಮತ ನಿರ್ಣಯ ಮಂಡಿಸಲಿದ್ದು, ಬಳಿಕ ಮುಖ್ಯಮಂತ್ರಿ ವಿಜಯ್ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿ ಬೆಂಬಲ ಕೋರಲಿದ್ದಾರೆ. ಇದೇ ವೇಳೆ ವಿರೋಧ ಪಕ್ಷದ ನಾಯಕರು ಕೂಡ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸಾಕಷ್ಟು ಉದ್ವಿಗ್ನತೆಯ ನಡುವೆ ನಡೆಯುವ ಸಾಧ್ಯತೆ ಇದೆ. ವಿಶೇಷವಾಗಿ ವಿರೋಧ ಪಕ್ಷ ವಿಭಜಿತ ಮತದಾನಕ್ಕೆ ಒತ್ತಾಯಿಸಿದರೆ ಪರಿಸ್ಥಿತಿ ಇನ್ನಷ್ಟು ಕುತೂಹಲಕರವಾಗಲಿದೆ.
ವಿಧಾನಸಭಾ ನಿಯಮಾವಳಿಯ ಪ್ರಕಾರ ವಿಭಜಿತ ಮತದಾನಕ್ಕೆ ಬೇಡಿಕೆ ಬಂದರೆ ಸಭಾಧ್ಯಕ್ಷರು ಅದನ್ನು ಅನುಮತಿಸಲೇಬೇಕು. ಮತದಾನಕ್ಕೂ ಮುನ್ನ ಎಲ್ಲ ಶಾಸಕರನ್ನು ಸಭೆಗೆ ಕರೆಯಲು ಮೂರು ಬಾರಿ ಗಂಟೆ ಮೊಳಗಿಸಲಾಗುತ್ತದೆ. ನಂತರ ಸಭಾಂಗಣದ ಬಾಗಿಲುಗಳನ್ನು ಮುಚ್ಚಿ, ವಿಧಾನಸಭಾ ಕಾರ್ಯದರ್ಶಿ ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ.
ಆರು ವಿಭಾಗಗಳಲ್ಲಿ ಶಾಸಕರನ್ನು ಪ್ರತ್ಯೇಕವಾಗಿ ನಿಲ್ಲಿಸಿ ಮತ ಎಣಿಕೆ ನಡೆಯಲಿದೆ. ಸಂಪ್ರದಾಯದಂತೆ ಮುಖ್ಯಮಂತ್ರಿ ಮೊದಲ ವಿಭಾಗದಲ್ಲಿ ಕುಳಿತುಕೊಳ್ಳಲಿದ್ದು, ವಿರೋಧ ಪಕ್ಷದ ನಾಯಕರು ಆರನೇ ವಿಭಾಗದಲ್ಲಿ ಎದುರುಬದಿಯಲ್ಲಿ ಆಸೀನರಾಗಲಿದ್ದಾರೆ.
ಅಂತಿಮ ಮತ ಎಣಿಕೆ ಬಳಿಕ ಸಭಾಧ್ಯಕ್ಷರು ಸರ್ಕಾರ ವಿಶ್ವಾಸಮತ ಗೆದ್ದಿದೆಯೇ ಅಥವಾ ಸೋತಿದೆಯೇ ಎಂದು ಘೋಷಿಸಲಿದ್ದಾರೆ. ವಿಶ್ವಾಸಮತ ಗೆದ್ದರೆ ವಿಜಯ್ ಸರ್ಕಾರ ಅಧಿಕಾರ ಮುಂದುವರಿಸಲಿದೆ. ಸೋತರೆ ರಾಜ್ಯಪಾಲರು ಸರ್ಕಾರ ವಿಸರ್ಜನೆ ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದಲ್ಲದೆ, ಆಡಳಿತಾರೂಢ ಮೈತ್ರಿಕೂಟಕ್ಕೆ ಅಲ್ಪ ಬಹುಮತವಿರುವ ಹಿನ್ನೆಲೆಯಲ್ಲಿ ಮೈತ್ರಿಕೂಟದ ಪ್ರತಿಯೊಬ್ಬ ಶಾಸಕರ ಹಾಜರಾತಿಯೂ ವಿಶ್ವಾಸಮತ ಪರೀಕ್ಷೆಯಲ್ಲಿ ನಿರ್ಣಾಯಕವಾಗಲಿದೆ.




