ಬೆಂಗಳೂರು: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಇಂದು ಬೆಳಗಿನ ಜಾವ ಘಟನೆ ನಡೆದಿದೆ.
ಸೈಯ್ಯದ್ ಜೀಶಾನ್ ಸರ್ವೀಸ್ ಗುಂಡೇಟು ತಿಂದ ಆರೋಪಿ. ಈತನಿಂದ ಹಲ್ಲೆಗೊಳಗಾದ ಕಾನ್ಸ್ಟೇಬಲ್ ಸಂದೀಪ್ ಕಾಂಬ್ಳೆ ಎಂಬವರು ಗಾಯಗೊಂಡಿದ್ದು, ಸದ್ಯ ಇಬ್ಬರೂ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಂಡೇಪಾಳ್ಯ ಪೊಲೀಸರು ತಿಳಿಸಿದ್ದಾರೆ.
ಬಂಡೇಪಾಳ್ಯ ಠಾಣಾ ವ್ಯಾಪ್ತಿಯ ಸೋಮ ಸುಂದರಪಾಳ್ಯದ ಬಳಿ ನಿನ್ನೆ ತಡರಾತ್ರಿ ಸ್ಕೂಟರ್ನಲ್ಲಿ ಆರೋಪಿಯು ಮಾರಕಾಸ್ತ್ರ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಸಬ್ ಇನ್ಸ್ಪೆಕ್ಟರ್ ಸಚಿನ್ ನೇತೃತ್ವದ ತಂಡವು ಆರೋಪಿಯ ಸ್ಕೂಟರ್ ಬೆನ್ನಟ್ಟಿ ತಡೆದರೂ ಆತ ತಪ್ಪಿಸಿಕೊಂಡಿದ್ದ. ಸೋಮಸುಂದರಪಾಳ್ಯ ಕೆರೆಯ ನಿರ್ಜನ ಪ್ರದೇಶದ ಬಳಿ ವೇಗವಾಗಿ ವಾಹನ ಚಲಾಯಿಸಿದ್ದ. ತ್ವರಿತವಾಗಿ ಹಿಂಬಾಲಿಸಿದ ಪೊಲೀಸರು ಆರೋಪಿಯನ್ನು ಸುತ್ತುವರೆದಿದ್ದರು. ಆಗ ತನ್ನ ಬಳಿಯಿದ್ದ ಉದ್ದನೆಯ ಕತ್ತಿನಿಂದ ಪೊಲೀಸರ ಮೇಲೆ ಆರೋಪಿಯು ಹಲ್ಲೆಗೆ ಯತ್ನಿಸಿದ್ದಾನೆ ಎಂದು ಎಲೆಕ್ಟ್ರಾನಿಕ್ ಉಪವಿಭಾಗದ ಡಿಸಿಪಿ ನಾರಾಯಣ್ ಮಾಹಿತಿ ನೀಡಿದ್ದಾರೆ.
ಶರಣಾಗುವಂತೆ ಪಿಎಸ್ಐ ಸಚಿನ್ ಪಿಸ್ತೂಲ್ನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ತಪ್ಪಿಸಿಕೊಳ್ಳುವ ಭರದಲ್ಲಿ ಕಾನ್ಸ್ಟೇಬಲ್ ಸಂದೀಪ್ ಕಾಂಬ್ಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಳಿಕ ಪಿಎಸ್ಐ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಗುಂಡು ಹೊಡೆದು ಬಂಧಿಸಲಾಯಿತು ಎಂದು ಡಿಸಿಪಿ ನಾರಾಯಣ್ ತಿಳಿಸಿದ್ದಾರೆ.
ಬೇಗೂರು ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣವೊಂರಲ್ಲಿ ಆರೋಪಿಯಾಗಿರುವ ಜಿಶಾನ್, ಇತ್ತೀಚೆಗೆ ಮಡಿವಾಳದಲ್ಲಿ ನಡೆದಿದ್ದ ಸುಹೈಲ್ ಎಂಬಾತನ ಕೊಲೆ ಪ್ರಕರಣದ ಅರೋಪಿಗಳಿಗೆ ಶಸ್ತ್ರಾಸ್ತ್ರ ಪೊರೈಸಿದ್ದ. ಸದ್ಯ ಈತನ ವಿರುದ್ದ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ ಬಂಡೆಪಾಳ್ಯ ಇನ್ಸ್ಪೆಕ್ಟರ್ ಮಂಜುನಾಥ್ ಆರ್ವಿ ಹಾಗೂ ಸೋಕೋ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




