Saturday, May 16, 2026

ಶಾಲೆಗಳಲ್ಲಿ ಹಿಜಾಬ್ ವಿಷಯವನ್ನು ರಾಜಕೀಯಗೊಳಿಸಬೇಡಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ

ಉಡುಪಿ: ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಧಾರ್ಮಿಕ ಸಂಕೇತಗಳ ವಿಚಾರವನ್ನು ರಾಜಕೀಯಗೊಳಿಸಬಾರದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಧಕ್ಕೆಯಾಗದಂತೆ ಎಲ್ಲ ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶಿಕ್ಷಣದಲ್ಲಿ ಯಾವುದೇ ಹಸ್ತಕ್ಷೇಪ ಇರಬಾರದು. ವಿದ್ಯಾರ್ಥಿಗಳು ನಿರಪರಾಧಿಗಳು. ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಭವಿಷ್ಯಕ್ಕಾಗಿ ಶಾಲೆ-ಕಾಲೇಜುಗಳಿಗೆ ಕಳುಹಿಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ರಾಜಕೀಯ ಮಾಡಬಾರದು,” ಎಂದರು.

“ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲಕರ ವಾತಾವರಣ ಇರಬೇಕು. ಹಿಜಾಬ್ ಆಗಲಿ ಅಥವಾ ಹಿಂದೂ ಧಾರ್ಮಿಕ ವಿಚಾರಗಳಾಗಲಿ, ರಾಜಕೀಯ ನಾಯಕರು ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡೇ ಮಾತನಾಡಬೇಕು,” ಎಂದು ಹೇಳಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭವಿಷ್ಯದ ಮುಖ್ಯಮಂತ್ರಿ ಎಂದು ಬಿಂಬಿಸುವ ಬ್ಯಾನರ್‌ಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಇದು ಅಭಿಮಾನಿಗಳ ಪ್ರೀತಿ ಮತ್ತು ಸ್ನೇಹದ ಪ್ರತೀಕ. ನಾನು ಪಕ್ಷದ ಶಿಸ್ತುಬದ್ಧ ಕಾರ್ಯಕರ್ತೆ. ನಾಯಕತ್ವದ ಬಗ್ಗೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ,” ಎಂದರು.

ಆರ್ಥಿಕ ಪರಿಸ್ಥಿತಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಬಳಕೆ ಕಡಿಮೆ ಮಾಡುವ ಕರೆಗೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, “ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಐದು ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಮುಂಬರುವ ಸಂಕಷ್ಟದ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ,” ಎಂದು ಆರೋಪಿಸಿದರು.

“ದೇಶದ ಹಿತದೃಷ್ಟಿಯಿಂದ ಮಿತವ್ಯಯ ಅಗತ್ಯವೆಂಬುದನ್ನು ಒಪ್ಪುತ್ತೇವೆ. ಆದರೆ ಈ ಪರಿಸ್ಥಿತಿಗೆ ಕಾರಣ ಯಾರು ಎಂಬುದರ ಬಗ್ಗೆ ಚರ್ಚೆಯಾಗಬೇಕು,” ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಜನರಿಗೆ ಚಿನ್ನ ಖರೀದಿಸಬೇಡಿ ಮತ್ತು ಇಂಧನ ಬಳಕೆ ಕಡಿಮೆ ಮಾಡಿ ಎಂದು ನೀಡಿದ ಕರೆಗೆ ಟೀಕಿಸಿದ ಅವರು, “ಜನರು ಮೋದಿ ಹೇಳಿದರೆ ತಟ್ಟೆ ಬಾರಿಸುತ್ತಾರೆ, ಚಪ್ಪಾಳೆ ತಟ್ಟುತ್ತಾರೆ. ಈಗ ಡೀಸೆಲ್-ಪೆಟ್ರೋಲ್ ಬಳಕೆ ಕಡಿಮೆ ಮಾಡಿ, ಚಿನ್ನ ಖರೀದಿಸಬೇಡಿ ಎನ್ನುತ್ತಿದ್ದಾರೆ. ಆದರೆ ಈ ಸಂಕಷ್ಟ ನಿವಾರಣೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದೂ ಮುಖ್ಯ,” ಎಂದು ಪ್ರಶ್ನಿಸಿದರು.

ಇಂಧನ ದರ ಏರಿಕೆ ಕುರಿತು ಮಾತನಾಡಿದ ಅವರು, “ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಬೆಲೆ ಏರಿಕೆ ಮಾಡದೆ, ಬಳಿಕ ತಕ್ಷಣ ಪೆಟ್ರೋಲ್-ಡೀಸೆಲ್ ದರ ಹೆಚ್ಚಿಸಲಾಗಿದೆ. ಜನರು ಇದನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಹೇಳಿದರು.

ಅಂಗನವಾಡಿ ಕೇಂದ್ರಗಳಲ್ಲಿ ಹಣ ವಸೂಲಿ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಚಿವೆ, “ಸರ್ಕಾರಿ ಅಂಗನವಾಡಿಗಳಲ್ಲಿ ಸಾವಿರ ರೂಪಾಯಿಯಾದರೂ ವಸೂಲಿ ನಡೆದರೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ವೆಚ್ಚವನ್ನೂ ಸರ್ಕಾರವೇ ಭರಿಸುತ್ತದೆ,” ಎಂದು ಸ್ಪಷ್ಟಪಡಿಸಿದರು.

More like this
Related

ಟಿ20 ವಿಶ್ವಕಪ್‌ಗೆ ಮುನ್ನ ಮಹಾಕಾಳ ದೇವರ ದರ್ಶನ ಪಡೆದ ಭಾರತೀಯ ಮಹಿಳಾ ಕ್ರಿಕೆಟ್ ತಂಡ

ಉಜ್ಜಯಿನಿ: ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ...

ರಾಷ್ಟ್ರೀಯ ಡಬಲ್ಸ್ ಸ್ಕ್ವಾಶ್ ಚಾಂಪಿಯನ್‌ಶಿಪ್: ವೆಲವನ್ ಸೆಂಥಿಲ್‌ಕುಮಾರ್, ಜೋಶ್ನಾ ಚಿನ್ನಪ್ಪಗೆ ಡಬಲ್ ಕಿರೀಟ

ಚೆನ್ನೈ, : ಮೂರನೇ ರಾಷ್ಟ್ರೀಯ ಡಬಲ್ಸ್ ಸ್ಕ್ವಾಶ್ ಚಾಂಪಿಯನ್‌ ಶಿಪ್‌ನಲ್ಲಿ ವೆಲವನ್...

ಶಿಷ್ಟಾಚಾರ ಉಲ್ಲಂಘನೆ, ಮುಂದೆಯೂ ಇದೇ ರೀತಿಯಾದ್ರೆ ಸಸ್ಪೆಂಡ್ ಮಾಡ್ತೀನಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾರ್ನಿಂಗ್

ಉಡುಪಿ: ಶಿಷ್ಟಾಚಾರ ಪ್ರಕಾರ ಅಧಿಕಾರಿಗಳು ಶಾಸಕರಿಗೆ ಗೌರವ ಕೊಡುವುದನ್ನು ಕೊಡಬೇಕು. ಪ್ರತಿ...

Copying is disabled on Udupi Digital News.