Tuesday, September 15, 2026

ಖರ್ಗೆ ಕಾರ್ಯಕ್ರಮ ಸ್ಥಳ ‘ಶುದ್ಧೀಕರಣ’; ಸಂವಿಧಾನದ ಮೌಲ್ಯಗಳ ಮೇಲಿನ ದಾಳಿ : ಡಿ ಕೆ ಶಿವಕುಮಾರ್

ಬೆಂಗಳೂರು: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಹಿರಂಗ ಸಭೆ ನಡೆದ ಸ್ಥಳ ‘ಶುದ್ಧೀಕರಣ’ ಮಾಡಿರುವ ಕ್ರಮವನ್ನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ಕೃತ್ಯ ಹಾಗೂ ಸಂವಿಧಾನಕ್ಕೆ ಎಸಗಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಶಿವಕುಮಾರ್ ಅವರು, “ಈ ಘಟನೆಯು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅಪಮಾನವಲ್ಲ, ಬದಲಿಗೆ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳ ಮೇಲಿನ ನೇರ ದಾಳಿ. ಅಲ್ಲದೆ, ಆಧುನಿಕ ಭಾರತದಲ್ಲಿ ಜಾತಿ ತಾರತಮ್ಯದ ಅಸಹ್ಯಕರ ನೆನಪು” ಎಂದು ಕಿಡಿಕಾರಿದ್ದಾರೆ.

“ಖರ್ಗೆಯವರು ದೇಶದ ಅತ್ಯಂತ ಗೌರವಾನ್ವಿತ ಜನನಾಯಕರು ಮತ್ತು ಜೀವಮಾನವಿಡೀ ಜನಸೇವೆ ಮಾಡಿದವರು. ದಲಿತ ನಾಯಕರೊಬ್ಬರು ಭಾಷಣ ಮಾಡಿದರು ಎಂಬ ಕಾರಣಕ್ಕೆ ಸಾರ್ವಜನಿಕ ಸ್ಥಳವೊಂದಕ್ಕೆ ಶುದ್ಧೀಕರಣ ಬೇಕು ಎಂದು ಬಿಂಬಿಸಿರುವುದು ಜಾತಿ ತಾರತಮ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ” ಎಂದು ಹೇಳಿದರು.

“ಇದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರವಲ್ಲ, ಸಮಾನತೆ, ಸಹೋದರತೆ ಮತ್ತು ಮಾನವ ಘನತೆಯನ್ನು ನಂಬುವ ಪ್ರತಿಯೊಬ್ಬ ಭಾರತೀಯನಿಗೂ ಎಸಗಿದ ಅಪಮಾನ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಅಸ್ಪೃಶ್ಯತೆಯು ಕೇವಲ ಅಭಿಪ್ರಾಯದ ವಿಷಯವಲ್ಲ, ಅದೊಂದು ಸಾಂವಿಧಾನಿಕ ಅಪರಾಧ ಮತ್ತು ನೈತಿಕ ಕಳಂಕ. ಇಂತಹ ಆಚರಣೆಗಳನ್ನು ಸಮರ್ಥಿಸಲು ಯತ್ನಿಸುವವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ಶಿಲ್ಪಿಗಳು ಕಲ್ಪಿಸಿಕೊಂಡ ಗಣರಾಜ್ಯದ ತಡಿಪಾಯದ ಮೇಲೆಯೇ ದಾಳಿ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

“ಸಾರ್ವಜನಿಕ ಜೀವನದಲ್ಲಿ ಇಂತಹ ತಾರತಮ್ಯಗಳು ಮರುಕಳಿಸುವುದನ್ನು ಭಾರತ ಸಹಿಸುವುದಿಲ್ಲ ಮತ್ತು ಸಹಿಸಬಾರದು. ಜಾತ್ಯತೀತವಾಗಿ ಪ್ರತಿಯೊಬ್ಬ ಪ್ರಜೆಯೂ ಸಮಾನ ಘನತೆ ಮತ್ತು ಗೌರವಕ್ಕೆ ಅರ್ಹನಾಗಿದ್ದಾನೆ. ಇಂತಹ ಕೃತ್ಯಗಳನ್ನು ಸಾಮಾನ್ಯಗೊಳಿಸುವ ಅಥವಾ ಸಮರ್ಥಿಸುವ ಯಾವುದೇ ಪ್ರಯತ್ನವನ್ನು ಸ್ಪಷ್ಟವಾಗಿ ತಿರಸ್ಕರಿಸಬೇಕು” ಎಂದು ತಿಳಿಸಿದ್ದಾರೆ.

“ಈ ವಿಚಾರದಲ್ಲಿ ನಾನು ಕಾಂಗ್ರೆಸ್ ಅಧ್ಯಕ್ಷರ ಜೊತೆ ದೃಢವಾಗಿ ನಿಲ್ಲುತ್ತೇನೆ. ಈ ಘಟನೆಯ ವಿರುದ್ಧ ಪ್ರಜಾಪ್ರಭುತ್ವವಾದಿ ಶಕ್ತಿಗಳು ಧ್ವನಿ ಎತ್ತಬೇಕು” ಕರೆ ನೀಡಿದ್ದಾರೆ.

“ಇಂತಹ ತಾರತಮ್ಯದ ಮುಂದೆ ಮೌನವಾಗಿರುವುದು ನಮ್ಮ ಸಮಾಜವನ್ನು ವಿಭಜಿಸಲು ಯತ್ನಿಸುವವರಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಸಮಾನತೆ, ನ್ಯಾಯ ಮತ್ತು ಎಲ್ಲರ ಘನತೆಯ ಸಾಂವಿಧಾನಿಕ ಭರವಸೆಯ ಮೇಲೆ ರೂಪುಗೊಂಡ ಭಾರತಕ್ಕೆ ನಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸಬೇಕಾಗಿದೆ” ಎಂದು ಸ್ಪಷ್ಟಪಡಿಸಿದರು.

More like this
Related

ದ್ವಿಚಕ್ರ ವಾಹನಕ್ಕೆ ಹಾಲು ಸಾಗಾಟದ ಟ್ಯಾಂಕರ್ ಢಿಕ್ಕಿ: ಒಂದೇ ಕುಟುಂಬದ ಮೂವರು ಮೃತ್ಯು

ಸ್ವಗ್ರಾಮದಲ್ಲಿ ಚೌತಿ ಹಬ್ಬ ಮುಗಿಸಿ ಊರಿಗೆ ಮರಳುತ್ತಿದ್ದ ವೇಳೆ ದುರ್ಘಟನೆ ಮಂಡ್ಯ: ದ್ವಿಚಕ್ರ...

ರೈತರನ್ನು ನಿರ್ಲಕ್ಷ ಮಾಡುತ್ತಿರುವ ಮೆಸ್ಕಾಂ: ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಕೃಷಿ ಪಂಪುಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸುತ್ತಿರುವ...

ಕಸ್ತೂರಿ ರಂಗನ್ ವರದಿ ಜಾರಿ: ಪಶ್ಚಿಮಘಟ್ಟ ತಪ್ಪಲು ಪ್ರದೇಶದ ಜನರಲ್ಲಿ ಆತಂಕ : ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಸೆ.18ರಂದು ಸಾರ್ವಜನಿಕರ ಅಹವಾಲು ಆಲಿಸಲು ಹೆಬ್ರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ಬಾಧಿತ...

ಕಂಡ್ಲೂರು ಹಳೆ ಸೇತುವೆ ನೆಲಸಮದ ಹುನ್ನಾರದ ಹಿಂದೆ ಭ್ರಷ್ಟಾಚಾರದ ಅನುಮಾನ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ ತೀರ್ಥಹಳ್ಳಿ ಸಂಪರ್ಕ ಮಾಡುವ ರಾಜ್ಯ ಹೆದ್ದಾರಿ ಹಾದು ಹೋಗುವ ವರಾಹಿ...

Copying is disabled on Udupi Digital News.