ಬೆಂಗಳೂರು: ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ರಾಜ್ಯದ 48 ಮಂದಿ ಐಪಿಎಸ್ ಅಧಿಕಾರಿಗಳಿಗೆ ಮುಂಭಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು(ಎಸ್ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಲಾಗಿದೆ.
ದಕ್ಷಿಣ ವಲಯ (ಮೈಸೂರು ) ಐಜಿಪಿಯಾಗಿ ಡಾ.ಎಂ.ಬಿ.ಬೋರಲಿಂಗಯ್ಯ, ಬೆಂಗಳೂರು ಅಪರಾಧ ವಿಭಾಗದ ಐಜಿಪಿ ಮತ್ತು ಅಪರ ಆಯುಕ್ತರಾಗಿ ಅಜಯ್ ಹಿಲೋರಿ, ಸಿಐಡಿಯ(ಆರ್ಥಿಕ ಅಪರಾಧಗಳು) ಡಿಐಜಿಯಾಗಿ ಡಾ.ಭೀಮಾಶಂಕರ್ ಗುಳೇದ್, ಕರ್ನಾಟಕ ಲೋಕಾಯುಕ್ತದ ಡಿಐಜಿಯಾಗಿ ಡಿ.ಆರ್.ಸಿರಿಗೌರಿ ಅವರಿಗೆ ಮುಂಭಡ್ತಿ ನೀಡಲಾಗಿದೆ. ಬಿಎಂಟಿಸಿ(ಭದ್ರತೆ ಮತ್ತು ಜಾಗೃತ) ನಿರ್ದೇಶಕ ಮಂಗಳೂರು ಮೂಲದ ಅಬ್ದುಲ್ ಅಹದ್ ಅವರನ್ನು ಡಿಐಜಿಯಾಗಿ ಭಡ್ತಿ ನೀಡಿ ಸದರಿ ಹುದ್ದೆಯನ್ನು ಮೇಲ್ದರ್ಜೇಗೇರಿಸಲಾಗಿದೆ.
ಕೆಎಸ್ಆರ್ಪಿ ಡಿಐಜಿಯಾಗಿ ಸಿ.ಕೆ.ಬಾಬಾ, ಆ್ಯಂಟಿ ನಾರ್ಕೋಟಿಕ್ ಟಾಸ್ಕ್ ಫೋರ್ಸ್ನ ಡಿಐಜಿಯಾಗಿ ಎಸ್.ಗಿರೀಶ್, ರೈಲ್ವೇಸ್ನ ಡಿಐಜಿಯಾಗಿ ಜೆ.ಕೆ.ರಶ್ಮಿ, ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದ ಡಿಐಜಿಯಾಗಿ ಟಿ.ಪಿ.ಶಿವಕುಮಾರ್ ಅವರಿಗೆ ಮುಂಭಡ್ತಿ ನೀಡಿ ಆದೇಶಿಸಲಾಗಿದೆ.
ರೈಲ್ವೇಸ್ನ ಎಸ್ಪಿಯಾಗಿ ಸಾರಾ ಫಾತಿಮಾ, ಮಂಡ್ಯ ಎಸ್ಪಿಯಾಗಿ ಡಾ.ವಿ.ಜೆ.ಶೋಭಾರಾಣಿ, ಚಿಕ್ಕಮಗಳೂರು ಎಸ್ಪಿಯಾಗಿ ಜಿತೇಂದ್ರ ಕುಮಾರ್ ದಯಾಮಾ, ಹಾಸನ ಎಸ್ಪಿಯಾಗಿ ಶುಭನ್ವಿತಾ, ಕೋಲಾರ ಎಸ್ಪಿಯಾಗಿ ಕನ್ನಿಕಾ ಸಿಕ್ರಿವಾಲ್, ಕೊಡಗು ಎಸ್ಪಿಯಾಗಿ ಆರ್.ಎನ್.ಬಿಂದುಮಣಿ, ಬಳ್ಳಾರಿ ಎಸ್ಪಿಯಾಗಿ ಪವನ್ ನೆಜ್ಜೂರು, ಚಾಮರಾಜನಗರದ ಎಸ್ಪಿಯಾಗಿ ಎಂ.ಮುತ್ತುರಾಜು, ರಾಯಚೂರು ಎಸ್ಪಿಯಾಗಿ ಅರುಣಾಂಶು ಗಿರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿಯಾಗಿ ಎಂ.ವಿ.ಚಂದ್ರಕಾಂತ್, ಶಿವಮೊಗ್ಗ ಎಸ್ಪಿಯಾಗಿ ಬಿ.ನಿಖಿಲ್, ಮೈಸೂರು ಎಸ್ಪಿಯಾಗಿ ಮಲ್ಲಿಕಾರ್ಜುನ ಬಾಲದಂಡಿ, ಬೆಳಗಾವಿ ಎಸ್ಪಿಯಾಗಿ ಕೆ.ರಾಮಾನುಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ.




