ಮಂಗಳೂರು: ನಗರದಲ್ಲಿ ಬಾಂಗ್ಲಾದೇಶಿಗಳ ಅಕ್ರಮ ವಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸರಿಯಾದ ಕ್ರಮ ಜರುಗಿಸದಿದ್ದಲ್ಲಿ ಬೆಂಗಳೂರು ಮಾದರಿಯಲ್ಲಿ ನಾವೇ ಕಾರ್ಯಾಚರಣೆ ಮಾಡುತ್ತೇವೆ ಎಂದು ರಾಷ್ಟ್ರರಕ್ಷಣಾ ಪಡೆಯ ಸಂಚಾಲಕ ಪುನೀತ್ ಕೆರೆಹಳ್ಳಿ ನೀಡಿರುವ ಹೇಳಿಕೆಯ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಕಾನೂನು ಮಾಹಿತಿಯೊಂದಿಗೆ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಗಳ ಬಗ್ಗೆ ಮಾಹಿತಿ ನೀಡಲು ಯಾರಾದರೂ ಆಸಕ್ತಿ ಹೊಂದಿದ್ದರೆ ಪೊಲೀಸ್ ಇಲಾಖೆಯು ಅವರನ್ನು ಸ್ವಾಗತಿಸುತ್ತದೆ. ಅಕ್ರಮವಾಸಿಗಳನ್ನು ಗಡೀಪಾರು ಮಾಡಲು ಕೂಡ ಬಯಸುತ್ತೇವೆ. ಆದರೆ ಅಕ್ರಮವಾಸಿಗಳನ್ನು ಪರಿಶೀಲಿಸುವ ಮತ್ತು ಬಂಧಿಸುವ ಅಧಿಕಾರ ಪೊಲೀಸರಿಗೆ ಮಾತ್ರ ಇರುತ್ತದೆ. ಬೇರೆ ಯಾರಾದರೂ ಪೊಲೀಸ್ ಇಲಾಖೆಯ ಕೆಲಸ ಮಾಡಲು ಪ್ರಯತ್ನಿಸಿದರೆ, ಯಾವುದೇ ದೈಹಿಕ ಹಲ್ಲೆ ಮಾಡಿದರೆ ಸೆ.341 ಮತ್ತು 506ರ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಳೆದ ವರ್ಷ ಯಾರೋ ಒಬ್ಬರು ಅಂತಹ ಪ್ರಯತ್ನ ಮಾಡಿ ಪೊಲೀಸ್ ಇಲಾಖೆಯ ಸೂಚನೆಯನ್ನು ಮೀರಿದ್ದಕ್ಕಾಗಿ ಜೈಲಿಗೆ ಹೋಗಿದ್ದರು. ಇಂದು ಯಾರೋ ಒಬ್ಬರು ಖಾಸಗಿ ರಕ್ಷಣೆಯ ಹಕ್ಕನ್ನು ಬಳಸುತ್ತೇವೆ ಎಂದು ಹೇಳಿದ್ದಾರೆ. ಖಾಸಗಿ ರಕ್ಷಣೆಯ ಹಕ್ಕು ತಕ್ಷಣವೇ ಸಂಭವಿಸುವ ವಿಷಯ. ಅದು ಯೋಜಿತವಲ್ಲ. ಸುದ್ದಿಗಾರರ ಜೊತೆ ಮಾತನಾ ಡಿದ ಬಳಿಕ ಖಾಸಗಿ ರಕ್ಷಣೆಯ ಹಕ್ಕಿನ ಹೆಸರಿನಲ್ಲಿ ಜನರ ಮೇಲೆ ದಾಳಿ ಮಾಡಲು ಮುಂದಾದರೆ ಅದು ಯೋಜಿತ ದಾಳಿಯಾಗುತ್ತದೆ. ಖಾಸಗಿ ರಕ್ಷಣೆಯ ಹಕ್ಕನ್ನು ಪ್ರತಿಪಾದಿಸುವ ವ್ಯಕ್ತಿಯು ಬಂಧನದ ನಂತರ ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು ಎಂದು ಕಾನೂನು ಹೇಳುತ್ತದೆ ಎಂದು ಪೊಲೀಸ್ ಆಯುಕ್ತರು ತಿಳುವಳಿಕೆಯ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗೋರಕ್ಷಣೆ ವೇಳೆ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಬುಧವಾರ ನಗರದ ಉರ್ವ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸುದ್ದಿಗಾರರ ಜೊತೆ ಪುನೀತ್ ಕೆರೆಹಳ್ಳಿ ಮಾತನಾಡುತ್ತಾ ಅಕ್ರಮ ಬಾಂಗ್ಲಾದೇಶಿಗಳಿಗೆ ಕರ್ನಾಟಕ ಯಾಕೆ ಸುರಕ್ಷಿತವಾಗಿದೆ? ಮಂಗಳೂರಿನಲ್ಲಿ ಕೇವಲ ನಾಮಕಾವಸ್ಥೆಗೆ ಬಾಂಗ್ಲಾದೇಶಿಗರನ್ನು ಹಿಡಿಯೋದಲ್ಲ. ಯಾವ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದೇಶಿ ಗರಿದ್ದಾರೆ ಎಂಬ ಲೆಕ್ಕ ನಾವು ಕೊಡುತ್ತೇವೆ. ನೀವು ನಮಗೆ ಫ್ರೀ ಹ್ಯಾಂಡ್ ಕೊಡಿ. ನಾವು ನಿಮಗೆ ಹಿಡಿದು ಕೊಡುತ್ತೇವೆ ಎಂದು ಹೇಳುವ ಮೂಲಕ ಮಂಗಳೂರು ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದರು. ಯಾವ ಯಾವ ಮುಸ್ಲಿಂ ಮುಖಂಡರು ಬಾಂಗ್ಲಾದೇಶಿಗರಿಗೆ ಸಾಥ್ ಕೊಡುತ್ತಾರೆ ಅನ್ನೋ ಮಾಹಿತಿ ನಾವು ನೀಡುತ್ತೇವೆ. ನಿಮ್ಮ ಗುಪ್ತಚಾರ ಇಲಾಖೆ ಏನು ಮಾಡುತ್ತಿದೆ? ರೈಲಿನಲ್ಲಿ ಬಂದಿಳಿಯುವವರನ್ನು ವಿಚಾರಣೆ ಮಾಡುತ್ತಿದ್ದೀರಾ? ಎಂದೆಲ್ಲಾ ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ್ದರು.




