ಯುಡಿ ನ್ಯೂಸ್ ಡಾಟ್ ಕಾಮ್
ಹೊಸದಿಲ್ಲಿ/ಟೆಹ್ರಾನ್: ಇರಾನ್ನಲ್ಲಿ ತೀವ್ರಗೊಂಡ ಪ್ರತಿಭಟನೆಯ ಕಿಚ್ಚು ಹಾಗೂ ಅಮೆರಿಕದಿಂದ ಇರಾನ್ ಮೇಲೆ ದಾಳಿ ಸಾಧ್ಯತೆ ಹೆಚ್ಚಿದ ನಡುವೆಯೇ ಅಲ್ಲಿರುವ ಭಾರತೀಯರಿಗೆ ಕೂಡಲೇ ತವರಿಗೆ ಮರಳುವಂತೆ ಭಾರತ ಸರಕಾರ ಸೂಚಿಸಿದೆ.
ಭಾರತೀಯ ನಾಗರಿಕರು ಮುಂಜಾಗ್ರತೆ ವಹಿಸಬೇಕು. ಪ್ರತಿಭಟನೆ ನಡೆಯುವ ಸ್ಥಳಗಳಿಗೆ ಹೋಗಬಾರದು. ಸದಾ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು. ಸ್ಥಳೀಯ ಮಾಧ್ಯಮಗಳ ಮೇಲೆ ನಿಗಾ ವಹಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಎಲ್ಲ ನಾಗರಿಕರು ಪಾಸ್ಪೋರ್ಟ್, ಗುರುತಿನ ಚೀಟಿ, ಪ್ರಯಾಣ ಹಾಗೂ ವಲಸೆ ದಾಖಲಾತಿಗಳು ಸುಲಭವಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಯಾವುದೇ ಸಹಾಯಕ್ಕಾಗಿ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ. ಅಂದಾಜಿನ ಪ್ರಕಾರ, ವಿದ್ಯಾರ್ಥಿಗಳು ಸೇರಿದಂತೆ 10,000 ಭಾರತೀಯರು ಇರಾನ್ನಲ್ಲಿ ನೆಲೆಸಿದ್ದಾರೆ. ಅಂತರ್ಜಾಲ ಸಂಪರ್ಕ ಕಡಿತ ಅಥವಾ ಬೇರೆ ಕಾರಣದಿಂದ ಭಾರತೀಯರು ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ, ಅವರ ಪರವಾಗಿ ಭಾರತದಲ್ಲಿರುವ ಅವರ ಕುಟುಂಬದ ಸದಸ್ಯರು ಹೆಸರು ನೋಂದಾಯಿಸುವಂತೆಯೂ ಸಚಿವಾಲಯ ಸಲಹೆ ನೀಡಿದೆ.




