ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಕಚೇರಿ ಮತ್ತು ಟಿಎಂಸಿ ಐಟಿ ವಿಭಾಗದ ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸ ಸೇರಿದಂತೆ ಹಲವೆಡೆ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ.
ಈಡಿ ದಾಳಿ ಬಗ್ಗೆ ಮಾಹಿತಿ ಬಂದ ತಕ್ಷಣ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜೈನ್ ನಿವಾಸಕ್ಕೆ ತೆರಳಿದ್ದಾರೆ. ಐ-ಪಿಎಸಿ ಕಚೇರಿ ಮೇಲಿನ ದಾಳಿಯನ್ನು ಬೆದರಿಕೆಯ ಕೃತ್ಯ ಎಂದ ಮಮತಾ ಬ್ಯಾನರ್ಜಿ, “ಇದು ಕಾನೂನು ಜಾರಿಯಲ್ಲ, ಇದು ರಾಜಕೀಯ ಸೇಡು. ಗೃಹ ಸಚಿವರು ದೇಶವನ್ನು ರಕ್ಷಿಸುವವರಂತೆ ಅಲ್ಲ, ಅತ್ಯಂತ ನೀಚ ಗೃಹ ಸಚಿವರಂತೆ ವರ್ತಿಸುತ್ತಿದ್ದಾರೆ” ಎಂದು ಹೇಳಿದರು.
ಈ ದಾಳಿಯನ್ನು “ಅತ್ಯಂತ ದುರದೃಷ್ಟಕರ” ಎಂದ ಮಮತಾ ಬ್ಯಾನರ್ಜಿ, ರಾಜಕೀಯ ಪಕ್ಷಗಳ ಐಟಿ ಮುಖ್ಯಸ್ಥರ ನಿವಾಸಗಳ ಮೇಲೆ ದಾಳಿ ಮಾಡುವುದು ಕೇಂದ್ರ ಗೃಹ ಸಚಿವರ ಕೆಲಸವೇ? ಎಂದು ಪ್ರಶ್ನಿಸಿದ್ದಾರೆ.
“ಅವರು ನಮ್ಮ ಐಟಿ ಮುಖ್ಯಸ್ಥರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಅವರು ನಮ್ಮ ಪಕ್ಷದ ದಾಖಲೆಗಳು ಮತ್ತು ಹಾರ್ಡ್ ಡಿಸ್ಕ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ. ಅದರಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ನಮ್ಮ ಅಭ್ಯರ್ಥಿಗಳ ಬಗ್ಗೆ ವಿವರಗಳಿವೆ. ನಾನು ಅವುಗಳನ್ನು ಮರಳಿ ತಂದಿದ್ದೇನೆ” ಎಂದು ಮಮತಾ ಬ್ಯಾನರ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.




