ನವದೆಹಲಿ: ಭಾರತದ ಚುನಾವಣಾ ಆಯೋಗ ರಾಜ್ಯಸಭೆಯ 24 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಜೂನ್ ಹಾಗೂ ಜುಲೈ 2026ರಲ್ಲಿ ಅವಧಿ ಪೂರ್ಣಗೊಳ್ಳಲಿರುವ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ಈ ಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ, 10 ರಾಜ್ಯಗಳಿಂದ ಆಯ್ಕೆಯಾದ 24 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯವಾಗಲಿದ್ದು, ಅದಕ್ಕಾಗಿ ಜೂನ್ 18ರಂದು ಮತದಾನ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ:
- ಜೂನ್ 1: ಅಧಿಸೂಚನೆ ಪ್ರಕಟಣೆ
- ಜೂನ್ 8: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
- ಜೂನ್ 9: ನಾಮಪತ್ರಗಳ ಪರಿಶೀಲನೆ
- ಜೂನ್ 11: ನಾಮಪತ್ರ ಹಿಂಪಡೆಯಲು ಕೊನೆಯ ದಿನ
- ಜೂನ್ 18: ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ
- ಜೂನ್ 18 ಸಂಜೆ 5ರಿಂದ ಮತ ಎಣಿಕೆ
- ಜೂನ್ 20ರೊಳಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣ
ಮತದಾನದ ವೇಳೆ ರಿಟರ್ನಿಂಗ್ ಅಧಿಕಾರಿ ನೀಡುವ ನಿಗದಿತ ವೈಲೆಟ್ ಬಣ್ಣದ ಪೆನ್ ಮಾತ್ರ ಬಳಕೆ ಮಾಡಲು ಅವಕಾಶ ಇರುತ್ತದೆ. ಬೇರೆ ಯಾವುದೇ ಪೆನ್ ಬಳಸಲು ಅನುಮತಿ ಇರುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಚುನಾವಣೆಗಳು ಆಂಧ್ರ ಪ್ರದೇಶ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ರಾಜಸ್ಥಾನ, ಅರುಣಾಚಲ ಪ್ರದೇಶ, ಕರ್ನಾಟಕ ಮತ್ತು ಮಿಜೋರಾಂ ರಾಜ್ಯಗಳ ಸ್ಥಾನಗಳಿಗೆ ನಡೆಯಲಿವೆ.
ಅವಧಿ ಮುಕ್ತಾಯಗೊಳ್ಳಲಿರುವ ಪ್ರಮುಖ ನಾಯಕರಲ್ಲಿ ದಿಗ್ವಿಜಯ ಸಿಂಗ್, ಎಚ್.ಡಿ.ದೇವೇಗೌಡ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿದ್ದಾರೆ.
ಇದಲ್ಲದೆ, ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಶಿಬು ಸೋರೆನ್ ಅವರ ನಿಧನದ ಬಳಿಕ ಖಾಲಿಯಾಗಿರುವ ಸ್ಥಾನಕ್ಕೂ ಚುನಾವಣೆ ನಡೆಯಲಿದೆ.
ಇತರೆ ನಿವೃತ್ತಿಯಾಗಲಿರುವ ಸದಸ್ಯರಲ್ಲಿ ಅಯೋಧ್ಯ ರಾಮಿರೆಡ್ಡಿ ಅಲ್ಲಾ, ಪಿಳ್ಳಿ ಸುಭಾಷ್ ಚಂದ್ರ ಬೋಸ್, ರಾಮ್ಭಾಯಿ ಹರಜೀಭಾಯಿ ಮೊಕರಿಯಾ, ಜಾರ್ಜ್ ಕುರಿಯನ್, ಮಹಾರಾಜಾ ಸನಜೋಬಾ ಲೈಶೆಂಬಾ, ವಾನ್ವೈರಾಯ್ ಖಾರ್ಲುಖಿ, ನೀರಜ್ ದಾಂಗಿ, ರಾಜೇಂದ್ರ ಗೆಹ್ಲೋಟ್, ನಬಾಂ ರೆಬಿಯಾ, ಇರಣ್ಣ ಕಡಾಡಿ ಮತ್ತು ಕೆ. ವನ್ಲಾಲ್ವೇನಾ ಸೇರಿದಂತೆ ಹಲವರು ಸೇರಿದ್ದಾರೆ.
ರಾಜ್ಯಸಭೆ ಭಾರತ ಸಂಸತ್ತಿನ ಮೇಲ್ಮನೆಯಾಗಿದ್ದು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸಕರಿಂದ ಅನುಪಾತಾತ್ಮಕ ಪ್ರತಿನಿಧಿತ್ವ ಪದ್ಧತಿಯ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.




