ಬೆಂಗಳೂರು : ಕರ್ನಾಟಕ ಮತ್ತು ಬಿಹಾರ ವಿಧಾನ ಪರಿಷತ್ನ ದ್ವೈವಾರ್ಷಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗವು ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಬಿಹಾರದ ಒಂಬತ್ತು ಹಾಗೂ ಕರ್ನಾಟಕದ ಏಳು ವಿಧಾನ ಪರಿಷತ್ ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದ್ದು, ಜೂನ್ 18 ರಂದು ಮತದಾನ ಪ್ರಕ್ರಿಯೆ ಜರುಗಲಿದೆ.
ಎಂಎಲ್ ಸಿಗಳ ಅಧಿಕಾರಾವಧಿ ಮುಕ್ತಾಯ
ಬಿಹಾರ ಮತ್ತು ಕರ್ನಾಟಕದ ವಿಧಾನ ಪರಿಷತ್ನ ಒಟ್ಟು 16 ಸದಸ್ಯರ ಅಧಿಕಾರಾವಧಿಯು ಕ್ರಮವಾಗಿ ಜೂನ್ 28 ಮತ್ತು ಜೂನ್ 30 ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಸದ್ಯ ಗೋವಿಂದ ರಾಜು, ನಾಸೀರ್ ಅಹ್ಮದ್, ಎನ್. ನಾಗರಾಜು (ಎಂ.ಟಿ.ಬಿ), ಪ್ರತಾಪ ಸಿಂಹ ನಾಯಕ್ ಕೆ, ತಿಪ್ಪಣ್ಣಪ್ಪ, ಸುನಿಲ್ ವಲ್ಯಾಪುರ ಹಾಗೂ ಬಿ.ಕೆ. ಹರಿಪ್ರಸಾದ್ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ. ಇವರೆಲ್ಲರ ಅಧಿಕಾರಾವಧಿಯು ಜೂನ್ 30 ಕ್ಕೆ ಕೊನೆಗೊಳ್ಳಲಿದೆ. ಈ ತೆರವಾಗುವ ಸ್ಥಾನಗಳಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ.
ಜೂನ್ 18 ರಂದು ಫಲಿತಾಂಶ
ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಜೂನ್ 1 ರಂದು ಅಧಿಕೃತವಾಗಿ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದೆ. ತದನಂತರ ಜೂನ್ 9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸ್ಪರ್ಧೆಯಿಂದ ಹಿಂದೆ ಸರಿಯಲು ಬಯಸುವ ಅಭ್ಯರ್ಥಿಗಳಿಗೆ ಜೂನ್ 11 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜೂನ್ 18 ರಂದು ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದೇ ದಿನ ಸಂಜೆ ಮತ ಎಣಿಕೆ ಕಾರ್ಯವೂ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಲಿದೆ.




