ಹಾಸನ: ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವ ಉದ್ದೇಶದಿಂದ ಹಾಸನ ಜಿಲ್ಲೆಯ ಮುಸ್ಲಿಂ ಸಮುದಾಯ ಮಹತ್ವದ ನಿರ್ಧಾರ ಕೈಗೊಂಡಿದೆ. ಜಿಲ್ಲೆಯ ಮುಸ್ಲಿಂ ಒಕ್ಕೂಟ ಈ ಬಾರಿಯ ಬಕ್ರೀದ್ ಪ್ರಯುಕ್ತ ಜಾನುವಾರುಗಳಾದ ದನ, ಹಸು ಹಾಗೂ ಎಮ್ಮೆಗಳನ್ನು ಖರೀದಿ ಮಾಡಬಾರದೆಂದು ಸ್ವಯಂ ನಿರ್ಬಂಧ ಹೇರಿಕೊಂಡಿದೆ.
ಈ ನಿರ್ಧಾರದ ಅನುಷ್ಠಾನಕ್ಕಾಗಿ ಮಂಗಳವಾರ ನಡೆದ ಸಾಪ್ತಾಹಿಕ ಸಂತೆಯಲ್ಲಿ ಮುಸ್ಲಿಂ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡು, ಸಮುದಾಯದ ಬಾಂಧವರು ಯಾವುದೇ ರೀತಿಯ ಜಾನುವಾರುಗಳನ್ನು ಖರೀದಿ ಮಾಡದಂತೆ ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಮುಸ್ಲಿಂ ಒಕ್ಕೂಟದ ಪ್ರಮುಖರು, “ಹಬ್ಬದ ಆಚರಣೆಗೆ ಯಾವುದೇ ರೀತಿಯ ಧಕ್ಕೆ ಅಥವಾ ವಿವಾದಗಳು ಉಂಟಾಗಬಾರದು ಎಂಬ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ,” ಎಂದು ತಿಳಿಸಿದರು.
ರಾಜ್ಯದಲ್ಲಿ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಉಲ್ಲೇಖಿಸಿದ ಮುಖಂಡರು, “ನಾವು ಕಾನೂನಿನ ಚೌಕಟ್ಟನ್ನು ಗೌರವಿಸುತ್ತೇವೆ. ಕಾನೂನು ಮೀರಿ ಯಾವುದೇ ಕೆಲಸವನ್ನು ಮಾಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಪ್ರಸ್ತುತ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಮುಖ್ಯ ಒಕ್ಕೂಟದ ಪ್ರಮುಖ ಅಮೀರ್ ಜಾನ್ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.




