ಮುಂಬೈನಲ್ಲಿ ಅಮಾನುಷ ಘಟನೆ; ಪತ್ನಿಗೆ ಕತ್ತಿಯಿಂದ ಬೆದರಿಕೆ, ಆಸಿಡ್ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಆರೋಪಿ ಅರ್ಭಾಜ್ ಸಯ್ಯದ್ ಬಂಧನ.
ಮುಂಬೈ: ಗೃಹ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಅಮಾನುಷ ಹಿಂಸೆ ನೀಡಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ಪತ್ನಿಯನ್ನು ಮನೆಯೊಳಗೆ ಬಂಧಿಸಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು, ಆಕೆ ತಪ್ಪಿಸಿಕೊಂಡ ನಂತರವೂ ಹಿಂಬಾಲಿಸಿ ಮತ್ತೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನನ್ನು ಅರ್ಭಾಜ್ ಸಯ್ಯದ್ ಎಂದು ಗುರುತಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಪತ್ನಿಯೊಂದಿಗೆ ನಡೆದ ಜಗಳದ ಬಳಿಕ ಅರ್ಭಾಜ್ ಆಕೆಯ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದಾನೆ. ಮನೆಯೊಳಗೆ ಬಂಧಿಸಿ ಥಳಿಸಿದಷ್ಟೇ ಅಲ್ಲದೆ, ಕತ್ತಿ ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಆಕೆಯ ಮುಖದ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕಿಂತಲೂ ಕ್ರೂರವಾಗಿ, ಪತ್ನಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ‘ಕೋಳಿ’ ಭಂಗಿಯಲ್ಲಿ (Rooster Position) ಕುಳಿತುಕೊಳ್ಳುವಂತೆ ಬಲವಂತಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಜೀವಭಯಗೊಂಡ ಮಹಿಳೆ ಯಾವುದೋ ರೀತಿಯಲ್ಲಿ ಮನೆಯಿಂದ ತಪ್ಪಿಸಿಕೊಂಡು ತನ್ನ ಪೋಷಕರ ಮನೆಗೆ ಆಶ್ರಯ ಪಡೆದಿದ್ದಾಳೆ. ಆದರೆ ಅಲ್ಲಿಗೂ ಹಿಂಬಾಲಿಸಿ ಬಂದ ಅರ್ಭಾಜ್, ಮನೆಯಲ್ಲಿ ಗಲಾಟೆ ಸೃಷ್ಟಿಸಿದ್ದಾನೆ.
NDTV ವರದಿ ಪ್ರಕಾರ, ಬಳಿಕ ನಡೆದ ವಾಗ್ವಾದದ ವೇಳೆ ಆರೋಪಿ ತನ್ನ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತಕ್ಷಣ ಕುಟುಂಬದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತನಿಖೆಯ ವೇಳೆ ಅರ್ಭಾಜ್ ಸಯ್ಯದ್ ವಿರುದ್ಧ ಈಗಾಗಲೇ 19 ಅಪರಾಧ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಆತ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಇತಿಹಾಸ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಮಹಿಳೆಯ ದೂರಿನ ಆಧಾರದ ಮೇಲೆ ವಿವಿಧ ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.




