ಭಂಡಾರ (ಮಹಾರಾಷ್ಟ್ರ): ಟ್ರಕ್ ಮತ್ತು ಪಿಕಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಪುಟ್ಟ ಮಕ್ಕಳು ಸೇರಿದಂತೆ ಒಂಬತ್ತು ಜನರು ಮೃತಪಟ್ಟಿದ್ದಾರೆ. ಭಂಡಾರ ಜಿಲ್ಲೆಯ ಲಖ್ನಿ ತಾಲೂಕಿನ ಪಿಂಪಾಲ್ಗಾಂವ್ ಬಳಿಕ ನಾಗ್ಪುರ – ರಾಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಒಂಬತ್ತು ಜನರು ಮೃತಪಟ್ಟರೆ, ಒಂಬತ್ತು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಭಂಡಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್ಗಢದ ರಾಜಧಾನಿ ರಾಯ್ಪುರದಿಂದ 19 ಮಹಿಳೆಯರು ಧಾರ್ಮಿಕ ಕಾರ್ಯಕ್ರಮಕ್ಕಾಗಿ ನಾಗ್ಪುರಕ್ಕೆ ಪಿಕಪ್ ವಾಹನದಲ್ಲಿ ಹೊರಟಿದ್ದರು. ಪಿಂಪಾಲ್ಗಾಂವ್ ಬಳಿ ಅತಿ ವೇಗದಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಪಿಕಪ್ ವಾಹನ, ಟ್ರಕ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತ ಎಷ್ಟು ಭೀಕರವಾಗಿತ್ತು ಎಂದರೆ ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಎಂಟು ಜನರು ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಓರ್ವ ಮಹಿಳೆ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರ ವಿವರ: ನಾಗ್ಪುರದ ನಿವಾಸಿ ಜಂಬೈ ರಾಮಾವತಾರ್ ವರ್ಮಾ (50), ಛತ್ತೀಸ್ಗಢ ನಿವಾಸಿಗಳಾದ ಮೀನಾಕ್ಷಿ ರಾಜ್ಕುಮಾರ್ ವರ್ಮಾ (26), ಧೈರ್ಯ ರೂಪೇಶ್ ಉಯಿಕೆ (4), ಸ್ವೀಟಿ ರೂಪೇಶ್ ಉಯಿಕೆ (6), ಗಾಯತ್ರಿ ರೂಪೇಶ್ ಉಯಿಕೆ (30), ಗಣೇಶಿಯಾ ಅರವತ್ ಪಟೇಲ್ (22) ಮತ್ತು ಸರಿತಾ ವಿಜಯ್ ವರ್ಮಾ (30). ಉಳಿದ ಇಬ್ಬರು ಮಹಿಳೆಯರ ಗುರುತು ಇನ್ನೂ ಪತ್ತೆಯಾಗಿಲ್ಲ. ಗುಲ್ಶನ್ ರಮೇಶ್ ವರ್ಮಾ (22), ಲಲಿತಾ ಯೋಗೇಶ್ ಪಟ್ಲೆ (26), ತನ್ಮಯ್ ಯೋಗೇಶ್ ಪಟ್ಲೆ (4), ಡಾಲಿ ಅರವತ್ ಪಟೇಲ್ (4), ಸುಖಿ ಯಾರಿ ಪಟೇಲ್ (20), ರಾಜಕುಮಾರಿ ಪಟೇಲ್ (57), ರಾಮಯ್ಯ ಪಟೇಲ್ (30) ಮತ್ತು ದರಿಯಾ ಪಟೇಲ್ (7) ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಸುದ್ದಿ ತಿಳಿದ ತಕ್ಷಣ, ತಮ್ಮ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಲಾಯಿತು. ಗ್ರಾಮಸ್ಥರ ಸಹಾಯದಿಂದ ಎಲ್ಲ ಮೃತದೇಹಗಳನ್ನು ವಾಹನದಿಂದ ಹೊರತೆಗೆಯಲಾಯಿತು. ಗಾಯಗೊಂಡವರನ್ನು ತಕ್ಷಣವೇ ಚಿಕಿತ್ಸೆಗಾಗಿ ಜಿಲ್ಲಾ ಸಾಮಾನ್ಯ ಆಸ್ಪತ್ರೆಗೆ ಕಳುಹಿಸಲಾಯಿತು. ಪಿಕಪ್ ವಾಹನದ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




