Monday, September 14, 2026

CJP ಪ್ರತಿಭಟನಾಕಾರರ ಮೇಲಿನ ಪೊಲೀಸ್‌ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್

“ನಮಗೆ ವಿಡಿಯೋಗಳನ್ನು ನೋಡಲು ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ಸಿಜೆಐ

ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಎಂದು ವಕೀಲರೊಬ್ಬರು ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ಬುಧವಾರ ಮನವಿ ಮಾಡಿದರು. ಆದರೆ, ಈ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಪೀಠ ನಿರಾಕರಿಸಿದೆ.

ಇದೇ ವೇಳೆ , ಪೊಲೀಸರು ನಡೆಸಿದ ಹಲ್ಲೆಗೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳನ್ನು ಸಲ್ಲಿಸಲು ವಕೀಲರು ಮುಂದಾದಾಗ, “ನಮಗೆ ವಿಡಿಯೋಗಳನ್ನು ನೋಡಲು ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ. ನಿಮ್ಮ ಸಮಯವನ್ನೂ ಹಾಳು ಮಾಡಬೇಡಿ, ನ್ಯಾಯಾಲಯದ ಸಮಯವನ್ನೂ ಹಾಳುಮಾಡಬೇಡಿ” ಎಂದು ಸಿಜೆಐ ಪ್ರತಿಕ್ರಿಯಿಸಿದ್ದಾರೆ.

ಆದರೆ ಪಟ್ಟುಬಿಡದ ವಕೀಲರು, ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ನಡಾವಳಿ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ ತರಬೇಕಾದ ಸುಧಾರಣೆಗಳು ಸೇರಿದಂತೆ ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವಾದಿಸಿದರು.

ವಕೀಲರ ಮಾತನ್ನು ಮಧ್ಯದಲ್ಲೇ ತಡೆದ ಮುಖ್ಯ ನ್ಯಾಯಮೂರ್ತಿಗಳು “ತುಂಬಾ ಧನ್ಯವಾದಗಳು” ಎಂದು ಹೇಳಿದ್ದಾರೆ.

ಪೊಲೀಸರ ದೌರ್ಜನ್ಯವನ್ನು ತೋರಿಸುವ ವೀಡಿಯೊಗಳನ್ನು ವಕೀಲರು ಮತ್ತೊಮ್ಮೆ ಉಲ್ಲೇಖಿಸಿದಾಗ, “ನಮಗೆ ಸಮಯವಿಲ್ಲ. ನಾವು ವೀಡಿಯೊಗಳನ್ನು ನೋಡಲು ಬಯಸುವುದಿಲ್ಲ” ಎಂದು ಸಿಜೆಐ ದೃಢವಾಗಿ ಹೇಳಿದರು.

ಮಂಗಳವಾರ ದಿಲ್ಲಿ ಹೈಕೋರ್ಟ್ ಕೂಡ ಪೊಲೀಸ್ ಕ್ರಮದ ವಿರುದ್ಧದ ಇದೇ ರೀತಿಯ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿತ್ತು ಮತ್ತು “ನ್ಯಾಯಾಲಯವನ್ನು ಇದರಲ್ಲಿ ಎಳೆದು ತರಬೇಡಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಕಾಕ್ರೋಚ್‌ ಜನತಾ ಪಾರ್ಟಿಯು ನೀಟ್-ಯುಜಿ 2026 ರ ಪರೀಕ್ಷಾ ಅಕ್ರಮ ಮತ್ತು ಪರೀಕ್ಷೆಗೆ ಸಂಬಂಧಿಸಿದ ಇತರ ಸಮಸ್ಯೆಗಳ ಕುರಿತು ಪ್ರತಿಭಟನೆಗಳ ನೇತೃತ್ವ ವಹಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಈ ಹಿಂದೆ, ಉದ್ಯೋಗವಿಲ್ಲದ ಯುವಕರು ಪತ್ರಕರ್ತರು ಮತ್ತು ಹೋರಾಟಗಾರರಾಗುತ್ತಿರುವುದನ್ನು ಉಲ್ಲೇಖಿಸಿ ‘ಕಾಕ್ರೋಚ್”ಎಂಬ ಪದವನ್ನು ಬಳಸಿದ್ದರು. ವ್ಯಾಪಕ ಸಾರ್ವಜನಿಕ ಆಕ್ರೋಶ ಎದುರಾದ ಹಿನ್ನೆಲೆಯಲ್ಲಿ, ಕೇವಲ ನಕಲಿ ಪದವಿ ಹೊಂದಿರುವವರನ್ನು ಉದ್ದೇಶಿಸಿ ತಮ್ಮ ಹೇಳಿಕೆಗಳು ಬಂದಿದೆ ಎಂದು ಸ್ಪಷ್ಟನೆ ನೀಡಿದ್ದರು. ಆದಾಗ್ಯೂ, ಈ ಹೇಳಿಕೆಯನ್ನು ವಿರೋಧಿಸಿ ಸಿಜೆಪಿ ಎಂಬ ವೇದಿಕೆಯು ರೂಪುಗೊಂಡಿದೆ.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.