ಹಾಸನ: ನಗರದ ಕರೀಗೌಡ ಕಾಲೋನಿಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ರೈಲು ಹಳಿಯಲ್ಲಿ ಮಲಗಿದ್ದ ವೃದ್ಧ ದಂಪತಿ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕತ್ತಲಿನ ವೇಳೆ ಘಟನೆ ನಡೆದಿರಬಹುದೆಂದು ತಿಳಿದುಬಂದಿದೆ. ರೈಲು ಹರಿದ ರಭಸಕ್ಕೆ ದಂಪತಿಯ ದೇಹಗಳು ತುಂಡಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯರು ಮಾಹಿತಿ ನೀಡಿದ ಬಳಿಕ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಾಥಮಿಕ ಪರಿಶೀಲನೆಯಲ್ಲಿ ದಂಪತಿ ಹಳಿಯ ಮೇಲೆಯೇ ಮಲಗಿದ್ದ ಸ್ಥಿತಿಯಲ್ಲಿ ರೈಲು ಚಕ್ರಗಳು ಹರಿದಿರುವುದು ಕಂಡುಬಂದಿದೆ. ನಡೆದುಕೊಂಡು ಹೋಗುವ ವೇಳೆ ಅಪಘಾತವಾಗಿದ್ದರೆ ದೇಹಗಳು ದೂರಕ್ಕೆ ತೂರಲ್ಪಡುತ್ತಿದ್ದರು. ದೇಹಗಳ ಸ್ಥಿತಿಗತಿಗಳನ್ನು ಗಮನಿಸಿದರೆ ಆತ್ಮಹತ್ಯೆಯ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿದುಬರುವ ಸಾಧ್ಯತೆ ಇದೆ.




