Monday, June 22, 2026

ಸಂಕಲ್ಪ ಸಮಾವೇಶ ಕಾರಣ ನೀಟ್ ಪರೀಕ್ಷೆ ವಂಚಿತರಾಗಿದ್ದರೆ ಅಂತಹ ವಿದ್ಯಾರ್ಥಿಗಳ ನಷ್ಟ ಭರಿಸಲು ಸಿದ್ಧ: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ಸರಣಿ ತಪ್ಪು ಮಾಹಿತಿ ನೀಡುವ ಬೆಂಗಳೂರಿನ ಸಂಸದರು ಮತ್ತೊಮ್ಮೆ ತಪ್ಪು ಸಂದೇಶ ಹರಡುವ ಕೆಲಸವನ್ನು ಬಹಳ ಉತ್ತಮವಾಗಿ ಮಾಡುತ್ತಿದ್ದಾರೆ. ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ನಿಜ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ನಾವು ರವಿವಾರ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಸಣ್ಣಪುಟ್ಟ ತೊಂದರೆಗಳು ಆಗಿವೆ. ಅವುಗಳನ್ನು ನಾವು ಅಲ್ಲಗೆಳೆಯುವುದಿಲ್ಲ. ಆದರೆ ನಮ್ಮ ಕಾರ್ಯಕ್ರಮದ ಟ್ರಾಫಿಕ್ ಸಮಸ್ಯೆಯಿಂದ ಎರಡು, ಮೂರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗದೇ ಉಳಿದಿದ್ದಾರೆ ಎಂಬ ಸುದ್ದಿ ನೋಡಿದೆ. ಈ ಕಾರ್ಯಕ್ರಮದಿಂದ ಇಂತಹ ಪ್ರಮಾದವಾಗಿದ್ದರೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮುಂಜಾಗ್ರತೆ ಕ್ರಮ ಕೈಗೊಳ್ಳುವಾಗ ಪೊಲೀಸರು ಹಾಗೂ ಸೇವಾದಳದ ಕಾರ್ಯಕರ್ತರಿಗೆ ಬಹಳ ಸ್ಪಷ್ಟವಾಗಿ ಕೆಲವು ನಿರ್ದೇಶನ ನೀಡಿದ್ದೆವು. ನೀಟ್ ಪ್ರಾರಂಭವಾಗಿದ್ದು 1:30ರ ಸಮಯದಲ್ಲಿ ನಮ್ಮ ಕಾರ್ಯಕ್ರಮಕ್ಕೆ ಬರಬೇಕಾಗಿದ್ದ ಎಲ್ಲಾ ಬಸ್ ಗಳು ಬೆಳಗ್ಗೆ 10:30ರ ವೇಳೆಗೆ ಅರಮನೆ ಮೈದಾನ ತಲುಪಿದ್ದವು. ಎಲ್ಲೂ ಸಮಸ್ಯೆಯಾಗಬಾರದು ಎಂದು ಅರಮನೆ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ಎರಡು, ಮೂರು ಮಕ್ಕಳಿಗೆ ತೊಂದರೆ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಅವರಿಗೆ ಮುಂದಿನ ಪರೀಕ್ಷೆ ಕೈಗೊಳ್ಳಲು ಬೇಕಾಗಿರುವ ಎಲ್ಲಾ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ನೀಟ್ ಪರೀಕ್ಷೆ ಮುಂದೂಡಿಕೆಯಾಗಿರುವುದು, ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದನ್ನು ನಾವು ನೋಡಿದ್ದೇವೆ. ಸಿಬಿಎಸ್ ಸಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದನ್ನೂ ನೋಡಿದ್ದೇವೆ. 12 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ದೇಶದ ಸರೆಂಡರ್ ಮೋದಿ ಅವರಾಗಲಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಾಗಲಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರಾ? ಬೆಂಗಳೂರಿನ ಸಂಸದರು ನಡೆಯಬಾರದ ಪ್ರಮಾದ ನಡೆದಿದೆ ಎಂದು ಮಾತನಾಡುತ್ತಿದ್ದಾರೆ. ಆದರೆ ಲಕ್ಷಾಂತರ ಜನರಿಗೆ ಪದೇ ಪದೆ ಪರೀಕ್ಷೆ ಬರೆಯುವಂತೆ ಮಾಡುತ್ತಿರುವುದು ಬಿಜೆಪಿ. ಪ್ರಶ್ನೆಪತ್ರಿಕೆಯಿಂದ 1.40 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿರುವಾಗ ಪ್ರಧಾನಿಯಾಗಲಿ, ಶಿಕ್ಷಣ ಸಚಿವರಾಗಲಿ ಅವರಿಗೆ ಸ್ಪಂದಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.

ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಾಗ ಕೇಂದ್ರ ಸಚಿವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮಕ್ಕಳ ಆತ್ಮಹತ್ಯೆಗೆ ಕಾರಣ ಯಾರು ಎಂದು ಬಿಜೆಪಿ ಸಂಸದರು ಹೇಳಬೇಕು. ಮೈಸೂರಿನಲ್ಲಿ 1,400 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅಲ್ಲಿ ಯಾವ ಕಾರ್ಯಕ್ರಮವಿತ್ತು. ಯಾದಗಿರಿಯಲ್ಲಿ 286, ದಕ್ಷಿಣ ಕನ್ನಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇಲ್ಲೆಲ್ಲಾ ಯಾವ ಕಾರ್ಯಕ್ರಮ ನಡೆದಿತ್ತು? ಕೆಲವು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಪರೀಕ್ಷೆ ಬರೆದಿರುವುದಾಗಿಯೂ ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.

ಸುಳ್ಳಿನ ಕಾರ್ಖಾನೆ ಇಟ್ಟುಕೊಂಡಿರುವ ಬಿಜೆಪಿಯವರು ತಮ್ಮ ತಪ್ಪು ಮರೆಮಾಚಲು ಕಾಂಗ್ರೆಸ್ ವಿರುದ್ಧ ಕುಂಟು ನೆಪ ಹೇಳುವುದು ಬೇಡ. ದೇಶಾದ್ಯಂತ ವಿದ್ಯಾರ್ಥಿಗಳು ಆತಂಕದಲ್ಲಿರುವಾಗ, ಪರೀಕ್ಷೆ ಬರೆಯದೇ ನಕಲಿ ಪ್ರಮಾಣಪತ್ರ ಹೊಂದಿರುವ ಪ್ರಧಾನಮಂತ್ರಿಗಳು ಪರಿಕ್ಷಾ ಪೆ ಚರ್ಚಾ ಮಾಡುತ್ತಾರೆ. ಆದರೆ ಸೋರಿಕೆ ಬಗ್ಗೆ ಮಾತನಾಡುತ್ತಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಹೊಣೆ ಯಾರು? ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಮಾನಸಿಕ ಯಾತನೆಗೆ ಹೋಣೆ ಯಾರು? ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಉತ್ತರ ಕೊಡುವವರು ಯಾರು? ಪರಿಕ್ಷೆ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದವರು ಯಾರು? ಇಂತಹ ಪ್ರಶ್ನೆಗಳಿಗೆ ಉತ್ತರ ನೀಡದೇ ಕಾಂಗ್ರೆಸ್ ಕಾರ್ಯಕ್ರಮ ಗುರಿಯಾಗಿಸಿ ಮಾತನಾಡಲು ಬಿಜೆಪಿ ನಾಯಕರಿಗೆ ನಾಚಿಕೆಯಾಗುವುದಿಲ್ಲವೇ? ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದೆ. ಅವರ ಹಕ್ಕುಗಳ ಪರವಾಗಿ ನಿಲ್ಲುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದವರು ಇಂದು ನೀತಿ ಪಾಠ ಹೇಳುತ್ತಿರುವುದು ಈ ದೇಶದ ದುರಂತ. ಬಿಜೆಪಿ ನೀಟ್ ಹಗರಣದಲ್ಲಿ ದೇಶದ ಜನರಿಗೆ ಕ್ಷಮೆ ಕೇಳಲಿ. ನಂತರ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಮೊದಲು ಈ ದೇಶದ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯ ಪ್ರದೇಶ ಸಿಎಂ ಆಗಿದ್ದಾಗ ವ್ಯಾಪಂ ಗೋಟಾಲ ಆಗಿದ್ದಾಗ 45 ಜನ ಕೊಲೆಯಾಗಿದೆ. ಆ ಪ್ರಕರಣದ ಸತ್ಯಾಂಶ ಈಗಲೂ ಹೊರಬರುತ್ತಿಲ್ಲ. ಅವರ ವೈಫಲ್ಯ ಮುಚ್ಚಿಹಾಕಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿರುವ ಬಿಜೆಪಿ ಗೂಬೆಗಳಿಗೆ ಜನ ಸರಿಯಾದ ಉತ್ತರ ನೀಡುತ್ತಾರೆ ಎಂದು ತಿವಿದರು.

ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಕಾದಿರುವುದನ್ನು ನೋಡಿ ಕಲಿಯಲಿ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಗಮನಸೆಳೆದಾಗ, “ಎಷ್ಟು ನಿಮಿಷ ಕಾದರು, ಯಾವ ಹೆಲಿಕಾಪ್ಟರ್ ನಲ್ಲಿ ಹೋದರು ಎಂದು ಅವರಿಂದ ನಾವು ಕಲಿಯಬೇಕಾಗಿಲ್ಲ. ಮೋದಿ ಅವರು ಕುಮಾರಸ್ವಾಮಿ ಅವರು ಉತ್ತರ ಕೊಡಬೇಕಾಗಿರುವುದು, ನೀಟ್ ಪ್ರಶ್ನೆಪತ್ರಿಕೆ ಮೂರು ಬಾರಿ ಸೋರಿಕೆಯಾಗಿರುವುದರಿಂದ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ. ಮೋದಿ ವಿಮಾನ ನಿಲ್ದಾಣದಲ್ಲಿ 45 ನಿಮಿಷ ಯಾವ ಕಾರಣಕ್ಕೆ ಇದ್ದರು ಎಂಬುದು ನನಗೆ ಗೊತ್ತಿದೆ. ಈಗ ಆ ವಿಚಾರ ಮಾತನಾಡುವುದಿಲ್ಲ. ನೀಟ್, ಸಿಬಿಎಸ್ ಸಿ, ಯುಪಿಎಸ್ ಸಿ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಉತ್ತರವಿಲ್ಲ, ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೆಕ್ಕೆ ಉತ್ತರ ಕೊಡದವರಿಂದ ಕಲಿಯುವುದೇನು ಇಲ್ಲ” ಎಂದರು.

ಕಾರ್ಯಕ್ರಮದಿಂದ ತೊಂದರೆ ಅನುಭವಿಸಿರುವ ವಿದ್ಯಾರ್ಥಿಗಳ ಬಗ್ಗೆ ಕೇಳಿದಾಗ, “ನಮ್ಮ ತಂಡ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಿದೆ. ಅವರಿಗೆ ಆಗಿರುವ ನಷ್ಟ ಭರಿಸಲು ಸಿದ್ಧರಿದ್ದೇವೆ. ಕೆಲವರಿಂದ ನಾಗ್ಪುರದ ಸುಳ್ಳಿನ ಸಂಘ ಸುಳ್ಳು ಹೇಳಿಸಿದೆ”ಎಂದು ತಿರುಗೇಟು ನೀಡಿದರು.

ನೀಟ್ ಪರೀಕ್ಷೆ ರದ್ದುಗೊಳಿಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ಸಿಇಟಿ ಪರೀಕ್ಷೆ ಮೂಲಕ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಿದ್ದು ಕರ್ನಾಟಕ. ದಕ್ಷಿಣ ಭಾರತದ ವಿದ್ಯಾರ್ಥಿಗಳು ಹೆಚ್ಚಾಗಿ ಆಯ್ಕೆಯಾಗುತ್ತಿದ್ದ ವ್ಯವಸ್ಥೆ ತಪ್ಪಿಸಲು ನೀಟ್ ವ್ಯವಸ್ಥೆ ತಂದರು. ಅಲ್ಲಿರುವ ಕಾಲೇಜುಗಳಿಗೂ, ಇಲ್ಲಿರುವ ಕಾಲೇಜುಗಳಿಗೂ ಇರುವ ವ್ಯತ್ಯಾಸ ನೋಡಿ” ಎಂದು ಕಿಡಿಕಾರಿದರು.

More like this
Related

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ

ಲಂಡನ್: ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿ ಹುದ್ದೆಗೆ...

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ   ಬಾಂಬ್ ಬೆದರಿಕೆ ಸಂದೇಶ

ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ...

ಉಡುಪಿ| ಅಕ್ರಮವಾಗಿ ದಂಪತಿಗೆ ಮಗು ಪೊರೈಕೆ: ಆಸ್ಪತ್ರೆ ವೈದ್ಯ ಸೇರಿ ಇಬ್ಬರ ಬಂಧನ

ಉಡುಪಿ: ಮಗುವಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು ತಿಂಗಳ ಹೆಣ್ಣು ಮಗುವನ್ನು...

ಶರತ್ ಖಾರ್ವಿಯ ಕನಸಿಗೆ ಚಾಂಪಿಯನ್ ಕಿರೀಟ: ಆರ್ ಎಕ್ಸ್ ಸಲಗದ ಭಾವನಾತ್ಮಕ ಗೆಲುವು

"ಶರತ್ ಅವರ ಜನ್ಮದಿನಕ್ಕೆ, ಈ ಟ್ರೋಫಿಯೇ ನಮ್ಮ ಉಡುಗೊರೆ": ಆರ್ ಎಕ್ಸ್...

Copying is disabled on Udupi Digital News.