ಯುಡಿ ನ್ಯೂಸ್ ಡಾಟ್ ಕಾಮ್
ಬೀದರ್: ರಾಜ್ಯದ ಹಲವೆಡೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಬಿಸಿಲ ಝಳಕ್ಕೆ ಕುಸಿದು ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆಯೊಂದು ನಗರದ ಹೊರವಲಯದ ಡಿಗ್ಗಿ ಗ್ರಾಮಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ-50 ರಸ್ತೆ ಬಳಿ ನಡೆದಿದೆ.
ಮೃತ ಯುವಕನನ್ನು ಉತ್ತರಪ್ರದೇಶ ಮೂಲದ ಮೊಹ್ಮದ್ ಸಮೀರ ಲಯಿಕ್ ಅಹ್ಮದ್ (20) ಎಂದು ಗುರುತಿಸಲಾಗಿದೆ. ಈತ ಕಮಲನಗರದಲ್ಲಿ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ತಾಪಮಾನದ ಏರಿಕೆಯಿಂದ ತಾಳಲಾರದೆ ಮಿರ್ಜಾಪುರ ಪಲ್ಲಾದ ನಿವಾಸಿ ಮಹ್ಮದ್ ಸಮೀರ ಮೆಕ್ಯಾನಿಕ್ ಅಂಗಡಿ ಬಳಿ ನೀರು ಕುಡಿದು, ತಲೆ ಸುತ್ತು ಬರುತ್ತಿದೆ ಎಂದು ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದ. ನಂತರ ಡಿಗ್ಗಿ ಗ್ರಾಮದ ಕಡೆಗೆ ತೆರಳುತ್ತಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರೂ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ತಾಪಮಾನ ಏರಿಕೆಯಾಗಿ ಹೀಟ್ ಸ್ಟ್ರೋಕ್ ನಿಂದಲೇ ಯುವಕ ಸಾವನ್ನಪ್ಪಿದ್ದಾನೆಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ನಂತರ ನಿಖರ ಕಾರಣ ತಿಳಿಯಲಿದೆ.
ರಾಜ್ಯದಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಘಟನೆಗಳು ಜನರಲ್ಲಿ ಆತಂಕ ಉಂಟುಮಾಡುತ್ತಿವೆ. ಈ ನಡುವೆ ಸಾರ್ವಜನಿಕರು ಬಿಸಿಲಿನ ವೇಳೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.




