ಕುಂದಾಪುರ: ಕನ್ಯಾ ಮರಿಯಮ್ಮನವರ ಜನ್ಮದಿನದ ಪ್ರಯುಕ್ತ ಕುಂದಾಪುರದ ರೋಜರಿ ಮಾತಾ ದೇವಾಲಯದಲ್ಲಿ ಮಂಗಳವಾರ ಮೊಂತಿ ಹಬ್ಬವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಗುರು ವಂ. ರೋಲ್ವಿನ್ ಫೆರ್ನಾಂಡಿಸ್ ಅವರು ಹೊಸ ತೆನೆಗಳಿಗೆ ಆಶೀರ್ವಾದ ನೆರವೇರಿಸಿದರು. ಬಳಿಕ ಪ್ರಧಾನ ಧರ್ಮಗುರು ವಂ. ಪೌಲ್ ರೇಗೊ ಅವರು ಪವಿತ್ರ ಬಲಿಪೂಜೆಯನ್ನು ಭಕ್ತಿಪೂರ್ವಕವಾಗಿ ನೆರವೇರಿಸಿದರು.

ಬಲಿಪೂಜೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಹೊಸ ಬೆಳೆಯೊಂದಿಗೆ ಕುಟುಂಬದ ಸದಸ್ಯರೆಲ್ಲರೂ ಪ್ರೀತಿ, ಸಂತೋಷ ಹಾಗೂ ಸೌಹಾರ್ದದಿಂದ ಒಂದಾಗಿ ಮೊಂತಿ ಹಬ್ಬವನ್ನು ಆಚರಿಸುವಂತೆ ಕರೆ ನೀಡಿದರು.

ಬಲಿಪೂಜೆಯ ಬಳಿಕ ವಾಹನಗಳ ಆಶೀರ್ವಾದ ಕಾರ್ಯಕ್ರಮ ನಡೆಯಿತು. ಹಿರಿಯರಿಗೆ ಹೊಸ ತೆನೆಗಳನ್ನು ಹಾಗೂ ಮಕ್ಕಳಿಗೆ ಕಬ್ಬನ್ನು ವಿತರಿಸಲಾಯಿತು.
ದೇವಾಲಯದ ಭಕ್ತರು ಹಾಗೂ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.




